ಮಣ್ಣಿನಲಿ ನೀರಿನಲಿ ಬದುಕನೇ ಇಟ್ಟಿರುವ ಸೂರ್ಯ ಚಂದ್ರರ..

ಸು. ರಂ. ಎಕ್ಕುಂಡಿಯವರ ಯಾವ ಕಾಣಿಕೆ ನೀಡಲೆ ನಿನಗೆ ಎಂಬ ಸುಂದರ ಕವಿತೆಯ ಕೊನೆ ಸಾಲು “ಮಣ್ಣಿನಲಿ ನೀರಿನಲಿ ಬದುಕನೇ ಇಟ್ಟಿರುವ ಸೂರ್ಯ ಚಂದ್ರರ ನಾ ತರಲಾರೆ”.

ಇವತ್ತು ಭೂಮಿ ಮೇಲೆ ಜೀವರಾಶಿಯಿರುವುದಕ್ಕೆ ಸೂರ್ಯ ಒಂದು ಮುಖ್ಯ ಕಾರಣ. ಭೂಮಿ ಸೂರ್ಯನಿಂದ ಸರಿಯಾದ ಅಂತರದಲ್ಲಿರುವುದು, ಭೂಮಿಯ ಮೇಲೆ ನೀರು ಇದ್ದಿದ್ದು, ಇಲ್ಲಿನ ಜೀವರಾಶಿ ಉತ್ಪತ್ತಿಗೆ ಇತರ ಕಾರಣಗಳು. ಸೂರ್ಯ ಒಂದು ಉರಿಯುತ್ತಿರುವ ಗೋಲ, ಅದು ಅಪಾರವಾದ ಶಕ್ತಿ ಕೇಂದ್ರ. ಜಗತ್ತಿನಲ್ಲಿರುವು  ಸಕಲ ಜೀವರಾಶಿಗಳು ಶಕ್ತಿಯ ರೂಪಗಳೆ. ಶಕ್ತಿಗೆ ಸಾವಿಲ್ಲ ಅದು ಒಂದು ರೂಪದಿಂದ ಇನ್ನೊಂದು ರೂಪ ತಾಳುತ್ತದೇ ಹೊರತು ಎಂದೂ ನಶಿಸುವುದಿಲ್ಲ (Energy can neither be created nor destroyed). ಭೂಮಿ ಮೇಲಿನ ಸಕಲ ಕಾರ್ಯಗಳಲ್ಲೂ ಸೂರ್ಯನ ಶಕ್ತಿಯ ಕೈವಾಡವಿದೆ. ಸಾಗರವನ್ನು ಕಾಯಿಸಿ ಅದರಿಂದ ಮೊಡ ಹುಟ್ಟಿಕೊಂಡು, ಮೊಡ ತನ್ನ ಪಯಣದ ಹಾದಿಯಲ್ಲಿ ಮಳೆಯನ್ನು ಸುರಿಸಿ, ಸಸ್ಯರಾಶಿಗಳನ್ನು ಬೆಳೆಸುತ್ತದೆ. ಸಸ್ಯರಾಶಿ ಯಿಂದ ಪ್ರಾಣಿರಾಶಿಗಳು ಬದುಕುತ್ತವೆ. ಸಸ್ಯಗಳು ಆಹಾರ ಉತ್ಪಾದಿಸಲು ಸೂರ್ಯನ ಬೇಳಕು ಬೇಕು. ಮುಂಜಾವಿನ ಹಾಗು ಸಂಜೆಯ ಸೂರ್ಯನ ಬೆಳಕಿಗೆ ಮೈಯೊಡ್ಡಿದರೆ ನಮ್ಮ ದೇಹದಲ್ಲಿ ವಿಟಾಮಿನ್ ಡಿ ಉತ್ಪತ್ತಿಯಾಗುತ್ತದೆ. ಗಾಯತ್ರಿ ಮಂತ್ರ ನಮಗೆ ಸರಿಯಾದ ದಾರಿಯನ್ನು ತೋರಿಸು ಎಂದು ಕೇಳಿಕೊಳ್ಳುವುದು ಸೂರ್ಯನನ್ನು. ಸೂರ್ಯ ಚಂದ್ರರು ಬೆಳಗು ರಾತ್ರಿಯ ಸಂಕೇತಗಳು. ಬೆಳಗು ರಾತ್ರಿ ಭೂಮಿಯ ಮೇಲಿನ ಜೀವರಾಶಿಗಳಿಗೆ ಅತ್ಯವಶ್ಯಕ, ಅಷ್ಟೇ ಅಲ್ಲದೆ ಜೀವರಾಶಿಗಳು ಈ ನೈಸರ್ಗಿಕ ಕಾರಣಗಳಿಂದ ಉತ್ಪತ್ತಿಯಾದ್ದರಿಂದ ಅವು ಭೂಮಿಗೆ unique ಆದ ಜೀವಗಳು. ನಮಗೆ ತಿಳಿಯದ ಬೇರೆಲ್ಲಾದರೂ ಜೀವಿಗಳಿದ್ದರೆ ಅವು ಅವರ ಸೂರ್ಯ ಮತ್ತು ಚಂದ್ರರಿಗೆ ತಕ್ಕಂತೆ ಇರುತ್ತವೆ. ಹೆಣ್ಣಿನ ಋತುಚಕ್ರ ೨೮ ದಿನಗಳು, ಇದೇ ಸಮಯವನ್ನು ಚಂದ್ರ ಭೂಮಿಯನ್ನು ಒಮ್ಮೆ ಸುತ್ತಿಬರಲು ತೆಗೆದುಕೊಳ್ಳುತ್ತಾನೆ. ಇದು ಆಕಸ್ಮಿಕವಲ್ಲ, ಚಂದ್ರನೊಡನೆ ಇರುವ ನಮ್ಮ ಸಂಬಂಧದ ಒಂದು ಸಣ್ಣ ಸತ್ಯ. ನಮ್ಮ ನಿತ್ಯ ಬದುಕಿನ ಜಂಜಾಟದಲ್ಲೂ ದಿನಾ, ನಮ್ಮ ಬದುಕಿಗೆ ಕಾರಣವಾದ ಸೂರ್ಯ ಮತ್ತು ಚಂದ್ರರ ನೆನೆಯುತ್ತಾ ಅವರ ಕಾಂತಿಗೆ ನಮ್ಮ ಮೈಯೊಡ್ಡಿದರೆ, ಅದು ನಮ್ಮಲ್ಲಿರುವ ಅನೇಕ ತೊಂದರೆಗಳನ್ನು ನಿವಾರಿಸುತ್ತದೆ.