ಎಲ್ಲಿ ಜಾರಿತೋ ನನ್ನ ಗುಂಡಿ!! ಜುಲೈ 24, 2008
Posted by Bala in ಸಣ್ಣಕತೆ.Tags: ಕತೆ
7 comments
ಬೆಳಿಗ್ಗೆ ನನಗೆ ತುಂಬಾ ಇಷ್ಟವಾದ ಶರಟನ್ನು ಇಸ್ತ್ರೀ ಮಾಡುತ್ತಿರುವಾಗ, ಶರಟಿನ ಮಧ್ಯದ ಒಂದು ಗುಂಡಿ ಸಡಿಲವಾಗಿದ್ದು ಕಾಣಿಸಿತು, ಗುಂಡಿಯನ್ನು ಸ್ವಲ್ಪ ಎಳೆದು ನೋಡಿದೆ, ನಾಲ್ಕೋ ಐದೊ ದಾರಗಳಿದ್ದು ಸ್ವಲ್ಪ ಲೂಸಾಗಿದ್ದುದು ಕಂಡುಬಂತು. ಈ ಗುಂಡಿ ಇವತ್ತು ಕಿತ್ತು ಹೋಗುತ್ತೆ ಅನ್ನಿಸಿತು. ಆದರೆ, ಆಫೀಸಿಗೆ ಹೊರಡುವ ಸಮಯವಾಗಿದ್ದು, ಮತ್ತೊಂದು ಶರಟನ್ನು ಇಸ್ತ್ರೀಮಾಡುವಷ್ಟು ಸಮಯವಿರಲಿಲ್ಲ, ಇಷ್ಟು ದಿನ ಬದುಕಿದ ಗುಂಡಿ, ಇವತ್ತೊಂದು ದಿನ ಬದುಕತ್ತೆ, ಅಲ್ಲದೇ ಇದು ಮಧ್ಯದ ಗುಂಡಿಯಾದ್ದರಿಂದ ಇದು ಇವತ್ತು ಬಧುಕುವ ಸಾಧ್ಯತೆ ಇದೇ ಎಂದುಕೊಂಡು ಶರಟನ್ನ ಮೈಯಿಗೇರಿಸಿದೆ.
ಮೆಟ್ರೋ ರೈಲಿನಲ್ಲಿ ಕೂತು, ಪುಸ್ತಕ ಓದುತಿದ್ದ ನಾನು, ಓದಿದ ಒಂದು ವಾಕ್ಯವನ್ನು ಆನಂದಿಸುತ್ತಾ ಪುಸ್ತಕದಿಂದ ತಲೆಯೆತ್ತಿದೆ, ಎದುರಿಗೆ ಒಂದು ಹುಡುಗಿ, ಆಕೆಯ ಮುಖದ ಒಂದು ಬಾಗದಲ್ಲಿದ್ದ ದಟ್ಟವಾದ ಕೂದಲನ್ನು ಎರಡೂಕೈಯಿಂದ ಹಿಡಿದು ಏನೋ ಯೋಚನೆಯಲ್ಲಿ ಮುಳುಗಿದ್ದು ಕಣ್ಣಿಗೆ ಬಿತ್ತು, ಸರಿಯಾಗಿ ಅವಳ ಕೈಬೆರಳುಗಳನ್ನು ಗಮನಿಸಿದಾಗ, ಆಕೆ ತನ್ನ ಒಂದು ಕೂದಲನ್ನ ಸೀಳುತಿದ್ದಾಳೇನೋ ಎನಿಸಿತು, ಕೂದಲ ಸೀಳುವಿಕೆಯನ್ನು ನೆನೆಸಿಕೊಂಡ ನನಗೆ ನಗು ಬಂತು.
ಆಫೀಸಿನಲ್ಲಿ ತುಂಬಾ ಕೆಲಸವಿದ್ದುದರಿಂದ ಗುಂಡಿಯ ವಿಷಯ ಮರೆತೇ ಹೋಗಿತ್ತು, ಬೆಳಿಗ್ಗೆ ಮೀಟಿಂಗೊಂದನ್ನು ಮುಗಿಸಿ ಹೊರಬರುವಾಗ, ಆಕಸ್ಮಿಕವಾಗಿ ಕಣ್ಣು ಶರಟಿನ ಗುಂಡಿಯ ಮೇಲೆ ಹೋಯಿತು, ಗುಂಡಿಯನ್ನು ನೋಡಿ ಖುಶಿಯಾಯಿತು, ಭಲೇ ಇನ್ನೂ ಜೀವವಿದೇ ಈ ಗುಂಡಿಗೆ ಎಂದುಕೊಂಡು ಮತ್ತೆ ಕೆಲಸದಲ್ಲಿ ಮುಳುಗಿಹೋದೆ.
ಮಧ್ಯಾನ ಊಟಕ್ಕೆಂದು ಹೊರಗೆ ಹೋಗುತಿದ್ದಾಗ, ನನ್ನ ಮುಂದೆ ಒಬ್ಬ ತಂದೆ ತನ್ನ ಸುಮಾರು ಐದು ವರುಷದ ಮಗನನ್ನು ಹೆಗಲಮೇಲೆ ಕೂರಿಸಿಕೊಂಡು, ತನ್ನ ಮೂರು ವರುಷದ ಮಗಳನ್ನು ಕೈಹಿಡಿದು ನಡೆಸಿಕೊಂಡು ಹೋಗುತಿದ್ದರು, ನಾನು ಅವರನ್ನು ಇನ್ನೇನು ಹಿಂದೆ ಹಾಕಿ ಮುಂದೆ ಹೋಗಬೇಕೆನ್ನುವಾಗ, ತಂದೆ ನಿಂತು ಮಗನನ್ನು ಕೆಳಗೆ ಇಳಿಸಿ ಮಗಳನ್ನು ಹೆಗಲ ಮೇಲೆ ಕೂರಿಸಿಕೊಳ್ಳುತ್ತಿರುವುದು ಕಾಣಿಸಿತು. ನನಗಿರುವ ಒಬ್ಬಳೇ ಮಗಳು ನೆನಪಿಗೆ ಬಂದು ನಗು ಬಂತು.
ಮಧ್ಯಾನ ಊಟವಾದ ಮೇಲೆ, ಕುರ್ಚಿಯಲ್ಲಿ ಕುಳಿತು ಕೆಲಸ ಮಾಡುತಿದ್ದಾಗ, ಶರಟಿನ ಮಧ್ಯದ ಭಾಗ ಮುಂದೆ ಬಂದು ಒಳಗಿನ ಬನಿಯನ್ ಕಾಣಿಸುತಿತ್ತು, ಗುಂಡಿ ಕಿತ್ತು ಹೋಗಿದೆ ಎಂಬ ಅರಿವು ಬಂದ ತಕ್ಷಣ, ನಾನು ಕುಳಿತಿದ್ದ ಕುರ್ಚಿಯ ಸುತ್ತಾಮುತ್ತಾ ನೋಡಿದೆ, ನನ್ನ ಟೇಬಲ್ ಕೆಳಗಡೆ ಬಗ್ಗಿ ನೋಡಿದೆ ಎಲ್ಲೂ ಗುಂಡಿ ಕಾಣಿಸಲಿಲ್ಲ, ನಾನು ಸಾಮಾನ್ಯ ನಡೆಯುವ ದಾರಿಗಳಲ್ಲೆಲ್ಲಾ ಹೋಗಿ ಬಂದೆ, ಎಲ್ಲೂ ಕಾಣಿಸಲಿಲ್ಲಾ. ಲಕ್ಷ್ಮೀ ನಾರಾಯಣ ಭಟ್ಟರ ಕವಿತೆ ನೆನಪಿಗೆ ಬಂತು, ಎಲ್ಲಿ ಜಾರಿತೋ ನನ್ನ ಗುಂಡಿ!! ಎಲ್ಲಿ ಅಲೆಯುತಿಹುದೋ ಎನೋ!! ಅಂತು ಬೆಳಿಗ್ಗೆ ಅನಿಸಿದಂತೆ ನನ್ನ ಪ್ರೀತಿಯ ಅಂಗಿಯ ಪ್ರೀತಿಯ ಗುಂಡಿ ಕಣ್ಮರೆಯಾಗಿತ್ತು,
ಸತ್ಯದ ನಿಜವಾದ ಧ್ವನಿ ಜುಲೈ 16, 2008
Posted by Bala in ಬದುಕು.Tags: ಟಿಬೇಟ್ ಬೌದ್ದ ಕತೆ
6 comments
ಸದಾನಂದ ಗುರುಕುಲದಲ್ಲಿದ್ದ ಶಿಷ್ಯರಲ್ಲೆಲ್ಲಾ ಅತಿ ಬುದ್ದಿವಂತ. ಈತ ಒಂದು ಮುಖ್ಯವಾದ ಮಂತ್ರವೊಂದನ್ನು ಕುರಿತು ಬಹಳ ಆಳವಾಗಿ ಅಭ್ಯಾಸ ಮಾಡಿದ್ದ. ವಿಧ್ಯಾಬ್ಯಾಸವಾದ ಮೇಲೆ, ಗುರುಕುಲದವರು ಅವನನ್ನು ಗುರುವಾಗಿ ನೇಮಿಸಿದರು. ಎರಡು ವರ್ಷಗಳಕಾಲ ಗುರುಕುಲದಲ್ಲಿ ಪಾಠ ಹೇಳಿದ ಸದಾನಂದ, ತನಗೀಗಾಗಲೇ ಎಲ್ಲಾ ತಿಳಿದಿದೆ, ತಾನಿನ್ನೇನನ್ನೂ ಕಲಿಯುವಂತಿಲ್ಲಾ ಎಂಬ ಧೊರಣೆ ತಳೆದಿದ್ದ. ಆಷ್ಟಾದರೂ, ಒಮ್ಮೆ ಹತ್ತಿರದ ದ್ವೀಪದಲ್ಲೊಬ್ಬ ಮಹಾತ್ಮನಿರುವುದು ಇವನ ಗಮನಕ್ಕೆ ಬಂತು, ಮಹಾತ್ಮನ ಮಹಿಮೆಯನ್ನು ಕೇಳಿ, ತಾನು ಈ ಮಹಾತ್ಮನಲ್ಲಿ ಹೋಗಿ ಹೆಚ್ಚಿನದನ್ನು ಕಲಿಯಬೇಕೆಂದು ನಿರ್ಧರಿಸಿದ. ಅಂಬಿಗನೊಬ್ಬನ ಸಹಾಯದಿಂದ ದೋಣಿಯೇರಿ ಕೆರೆಯ ಮಧ್ಯದಲ್ಲಿದ್ದ , ಮಹಾತ್ಮನ ಸ್ಥಳಕ್ಕೆ ಸದಾನಂದ ಬಂದ. ಮಹಾತ್ಮ ಸದಾನಂದನನ್ನು ಆದರದಿಂದ ಬರಮಾಡಿಕೊಂಡು, ಸದಾನಂದನಿಗೆ ಗಿಡಿಮೂಲಿಕೆ ಚಹಾ ಮಾಡಿಕೊಟ್ಟ. ಇಬ್ಬರೂ ಚಹಾಕುಡಿಯುತ್ತಾ ಮಾತನಾಡಲಾರಂಭಿಸಿದರು.
ಸದಾನಂದ ಮಹಾತ್ಮನನ್ನು ಕೇಳಿದ, “ನಿಮ್ಮ ಅಧ್ಯಾತ್ಮದ ಸಾದನೆ ಹೇಗಿದೆ”. ಅದಕ್ಕೆ ಮಹಾತ್ಮ, “ನನ್ನ ಅಧ್ಯಾತ್ಮ ಸಾಧನೆಯಲ್ಲಿ ಹೇಳಿಕೊಳ್ಳುವಂತಾದ್ದೇನೂ ಇಲ್ಲ, ನಾನು ಯಾವಾಗಲು ಮಂತ್ರವೊಂದನ್ನು ಜಪಿಸುತ್ತಿರುತ್ತೇನೆ, ಅದಕ್ಕಿಂತ ಹೆಚ್ಚೇನೂ ಮಾಡುವುದಿಲ್ಲ”, ಎಂದುತ್ತರಿಸಿದ.
ಮಹಾತ್ಮ ಉಪಯೋಗಿಸುತ್ತಿದ್ದ ಮಂತ್ರ ತಾನು ಆಳವಾಗಿ ಅಭ್ಯಸಿಸಿದ್ದ ಮಂತ್ರ ಎಂದು ತಿಳಿದಾಗ ಸದಾನಂದ ಅತ್ಯಾನಂದದಿಂದ, ಮಹಾತ್ಮನನ್ನು ಆ ಮಂತ್ರವನ್ನು ಒಮ್ಮೆ ನಿಮ್ಮ ಬಾಯಿಂದ ಕೇಳುವಾಸೆ ಎಂದು ಕೇಳಿಕೊಂಡ.
ಮಹಾತ್ಮ ಗಟ್ಟಿಯಾಗಿ ಮಂತ್ರವನ್ನು ಉಚ್ಚರಿಸಿದಾಗ ಸದಾನಂದ ಬೆಚ್ಚಿಬಿದ್ದ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಮಹಾತ್ಮ, “ನನ್ನಿಂದೇನಾದರೂ ತಪ್ಪಾಯಿತೇ”, ಎಂದು ಸದಾನಂದನನ್ನು ಕೇಳಿದ.
ಅದಕ್ಕೆ ಸದಾನಂದ, “ಮಹಾತ್ಮ ತಮಗೆ ಹೇಗೆ ಹೇಳುವುದೋ ತಿಳಿಯುತಿಲ್ಲಾ, ನೀವು ನಿಮ್ಮ ಇಡೀ ಜೀವನವನ್ನ ನಿರರ್ಥಕವಾಗಿ ಕಳೆದಿದ್ದೀರ, ನೀವು ಹೇಳಿದ ಮಂತ್ರದ ಉಚ್ಚಾರಣೆ ಸರಿಯಾಗಿಲ್ಲ” ಎಂದ
“ಓ ದೇವರೇ, ಎಂಥಾ ಅನರ್ಥವಾಗಿಬಿಟ್ಟಿದೆ, ಸರಿ, ಈ ಮಂತ್ರದ ಸರಿಯಾದ ಉಚ್ಚಾರವನ್ನು ತಿಳಿಸುವೆಯಾ”, ಎಂದು ಮಹಾತ್ಮ ಸದಾನಂದನನ್ನು ಕೇಳಿಕೊಳ್ಳುತ್ತಾನೆ.
ಸದಾನಂದ ಮಹಾತ್ಮನಿಗೆ ಮಂತ್ರದ ಸರಿಯಾದ ಉಚ್ಚಾರವನ್ನು ಹೇಳಿಕೊಡುತ್ತಾನೆ. ಮಹಾತ್ಮ ಅತ್ಯಾನಂದದಿಂದ ಸದಾನಂದನಿಗೆ ಧನ್ಯವಾದಗಳನ್ನು ತಿಳಿಸಿ, “ನಾನು ಈ ಹೊಸಾ ಉಚ್ಚಾರಣೆಯನ್ನು ಕಲಿಯಲು ಸ್ವಲ್ಪ ಸಮಯಬೇಕು”, ಎಂದು ಹೇಳಿ ಹೊರಟುಹೋಗುತ್ತಾನೆ.
ಕೆರೆಯ ದಡಕ್ಕೆ ನಡೆದು ಬರುವಾಗ ಸದಾನಂದನಿಗೆ, ನಾನೇನು ಹೊಸದಾಗಿ ಕಲಿಯಬೇಕಾಗಿಲ್ಲಾ, ನನಗೆಲ್ಲಾ ಆಗಲೇ ತಿಳಿದಿದೆ ಎಂಬುದು ಮನದಟ್ಟಾಗಿ, ಆ ಮಹಾತ್ಮನ ದುರಾದೃಷ್ಟಕ್ಕೆ ಮರುಗಿದ. ನಾನೇನಾದರೂ ಇಲ್ಲಿಗೆ ಬರದೇ ಹೋಗಿದ್ದರೆ, ಈ ಮಹಾತ್ಮನ ಗತಿ ಏನಾಗುತಿತ್ತು? ನಾನು ಬಂದದ್ದರಿಂದ ಈ ಮಹಾತ್ಮ ತನಗುಳಿದಿರುವ ಅಲ್ಪ ಆಯುಷ್ಯದಲ್ಲಿ ಮಂತ್ರವನ್ನು ಸರಿಯಾಗಿ ಉಚ್ಚರಿಸಲು ಕಲಿಯಬಹುದು, ಎಂದುಕೊಂಡು ತನ್ನನ್ನು ಕರೆತಂದ ಅಂಬಿಗನನ್ನು ಹುಡುಕುತ್ತಾ ಹೊರಟ.
ದೋಣಿ ಕೆರೆಯ ಮಧ್ಯಭಾಗದಲ್ಲಿದ್ದಾಗ, ಅಂಬಿಗ ಇದ್ದಕ್ಕಿದ್ದಂತೆ ತನ್ನ ಹುಟ್ಟುಗೋಲನ್ನ ಕೈಬಿಟ್ಟು, ಬಾಯಿ ತೆರೆದು ದಂಗಾಗಿದ್ದನ್ನು ನೋಡಿದ ಸದಾನಂದ, ಹಿಂದಿರುಗಿ ನೋಡುತ್ತಾನೆ, ಆ ಮಹಾತ್ಮ ಅತಿ ದೈನ್ಯತೆಯಿಂದ ದೋಣಿಯ ಪಕ್ಕದಲ್ಲಿ, ನೀರಿನ ಮೇಲೆ ನಿಂತಿದ್ದ.
“ದಯವಿಟ್ಟು ಕ್ಷಮಿಸಿ, ನಿಮಗೆ ಮತ್ತೆ ತೊಂದರೆ ಕೊಡಲು ಬಂದಿದ್ದೇನೆ, ನೀವು ಹೇಳಿಕೊಟ್ಟ ಮಂತ್ರದ ಉಚ್ಚಾರಣೆ ಮರೆತುಹೋಯಿತು, ದಯವಿಟ್ಟು ಮತ್ತೊಮ್ಮೆ ಹೇಳಿಕೊಡುವಿರಾ” ಎಂದು ಮಹಾತ್ಮ ಸದಾನಂದನನ್ನು ಕೇಳಿಕೊಂಡಾಗ.
ನಾಚಿ ನೀರಾದ ಸದಾನಂದ ತಲೆತಗ್ಗಿಸಿ ಹೇಳಿದ, “ಮಹಾತ್ಮ ನಿಮಗೆ ಅದರ ಅವಶ್ಯಕತೆ ಯಿಲ್ಲ”.
ಆದರೆ ಮಹಾತ್ಮ ಹಲವಾರು ಬಾರಿ ಪ್ರೀತಿಯಿಂದ ಒತ್ತಾಯಿಸಿದಾಗ, ಕೊನೆಗೆ ಸದಾನಂದ ಮತ್ತೊಮ್ಮೆ ಮಂತ್ರದ ಸರಿಯಾದ ಉಚ್ಚಾರಣೆಯನ್ನು ಮಹಾತ್ಮನಿಗೆ ಹೇಳಿಕೊಟ್ಟ.
ಈ ಬಾರಿ ಮಹಾತ್ಮ ತನ್ಮಯತೆಯಿಂದ ಸರಿಯಾದ ಮಂತ್ರವನ್ನು ಉಚ್ಚರಿಸುತ್ತಾ, ನಿಧಾನವಾಗಿ ನೀರಿನಮೇಲೆ ಹೆಚ್ಚೆಯಿಡುತ್ತಾ ತನ್ನ ದ್ವೀಪದತ್ತ ಸಾಗಿದ.
ಇದೊಂದು ಟಿಬೇಟ್ ಬೌದ್ದರಲ್ಲಿ ಪ್ರಚಲಿತವಾದ ಕತೆ.
ಆಲೋಚನೆ ಸ್ವಭಾವವಾಗುವ ಪರಿ ಜುಲೈ 15, 2008
Posted by Bala in ಬದುಕು.Tags: ಆಲೋಚನೆ ಸ್ವಭಾವ
add a comment
The thought manifests as the word;
The word manifests as the deed;
The deed develops into habit;
And habit hardens into character;
So watch the thought and its ways with care,
And let it spring from love
Born out of concern for all beings
-Buddha
ಅಲೋಚನೆಗಳು ಪದಗಳಾಗಿ ತೋರ್ಪಡಿಸಿಕೊಂಡು
ಪದಗಳು ಕಾರ್ಯದ ಕಾರಣೀಭೂತವಾಗಿ
ಕಾರ್ಯವು ಗುಣವಾಗಿ ಬೆಳೆದು
ಘನೀಭೂತವಾದ ಗುಣಗಳು ಸ್ವಭಾವವಾಗೆ
ಆಲೋಚನೆ ಸ್ವಭಾವವಾಗುವ ಪರಿಯ
ಅರಿವಿನ ಚಿಲುಮೆ
ಸಕಲಪ್ರಾಣಿಗಳಲ್ಲಿನ ಕರುಣೆಯಿಂದುದಿಸಿದ
ಪ್ರೀತಿಯಿಂದ ಹರಿಯಲಿ
ಕೇಳಿಸಿಕೊಳ್ಳುವಿಕೆ ಜುಲೈ 7, 2008
Posted by Bala in ಬದುಕು.Tags: ಕೇಳಿಸಿಕೊಳ್ಲುವಿಕೆ
2 comments
So when you are listening to somebody, completely, attentively, then you are listening not only to the words, but also to the feeling of what is being conveyed, to the whole of it, not part of it. – Jiddu Krishnamurti
ಜಿದ್ದೂ ಕೃಷ್ಣಮೂರ್ತಿಯವರ ಮೇಲಿನ ಹೇಳಿಕೆ, ಮನುಷ್ಯನ ಜೀವನದಲ್ಲಿ ಕೇಳಿಸಿಕೊಳ್ಳುವಿಕೆಯ (Listening) ಬಗೆ ಹಾಗೂ ಪ್ರಾಮುಖ್ಯತೆಯನ್ನು ತಿಳಿಸುತ್ತದೆ . ತೆರೆದ ಮನಸ್ಸಿನಿಂದ, ಪೂರ್ವಾಗ್ರಹ ಪೀಡಿತರಾಗಿರದೆ, ತದೇಕ ಚಿತ್ತದಿಂದ ಇನ್ನೊಬ್ಬರ ಮಾತನ್ನು ಅವರ ಭಾವನೆಗಳೊಂದಿಗೆ ಸಂಪೂರ್ಣವಾಗಿ ಕೇಳಿಸಿಕೊಳ್ಳುವುದು ನಮ್ಮ ಜೀವನದಲ್ಲಿ ಬಹಳ ಮುಖ್ಯ. ಈ ಬಗೆಯ ಕೇಳಿಸಿಕೊಳ್ಳುವಿಕೆ ಇಲ್ಲದಿದ್ದರೆ, ನಾವು ಇನ್ನೊಬ್ಬರ ಮಾತನ್ನು ತಪ್ಪಾಗಿ ಅರ್ಥೈಸಿ, ಕೋಪ, ಸಿಟ್ಟು, ಅಸೂಯೆ ಮುಂತಾದ ಭಾವನೆಗಳಿಗೆ ಒಳಗಾಗಿ, ಅದರಿಂದಾಗಿ ಕಷ್ಟ,, ದುಃಖ ವನ್ನು ಪಡೆಯುವ ಸಾಧ್ಯತೆಯಿರುತ್ತದೆ. ಸರಿಯಾದ ಕೇಳಿಸಿಕೊಳ್ಳುವಿಕೆಯಿಂದ, ಹೇಳಿದವನ ಮಾತು ಮತ್ತು ಭಾವನೆಗಳು ಪೂರ್ಣವಾಗಿ ಅರ್ಥವಾಗಿ ಅದಕ್ಕೆ ತಕ್ಕಂತೆ ಕೋಪ ಸಿಟ್ಟಿಲ್ಲದೇ, ಶಾಂತವಾಗಿ ಉತ್ತರಿಸಬಹುದು.
ಎದುರಾಳಿ ಇನ್ನೂ ಆತನ ವಾಕ್ಯವನ್ನು ಸಂಪೂರ್ಣಮಾಡಿರುವುದೇ ಇಲ್ಲಾ, ಅಷ್ಟರಲ್ಲೇ, ಎಲ್ಲಾ ಅರ್ಥವಾದವರಂತೆ ನಮ್ಮ ವಾಗ್ಧಾಳಿಯನ್ನು ಆರಂಭಿಸಿಬಿಟ್ಟಿರುತ್ತೇವೆ, ಎಷ್ಟೋವೇಳೆ, ಎದುರಾಳಿ ತನ್ನ ವಾಕ್ಯವನ್ನು ಸಂಪೂರ್ಣಗೊಳಿಸಲು ಬಿಟ್ಟಿದ್ದರೆ, ಎಷ್ಟೊಂದು ಗೊಂದಲ ತಪ್ಪುತ್ತಿತ್ತು ಎಂಬುದು ನಮ್ಮ ಗ್ರಹಿಕೆಗೆ ಬಂದಿರುತ್ತದೆ. ನಾವು ಪೂರ್ವಾಗ್ರಹ ಪೀಡಿತರಾಗಿದ್ದರೆ, ಎದುರಾಳಿ ಹೇಳುವುದನ್ನ ಸರಿಯಾಗಿ ಕೇಳಿಸಿಕೊಳ್ಳುವುದೇ ಇಲ್ಲಾ. ಈ ನಿರ್ಲಕ್ಷ್ಯ ಕೂಡ ಗೊಂದಲ ತೊಂದರೆಗಳಿಗೆ ಎಡೆಮಾಡಿಕೊಡಬಹುದು. ಎದುರಾಳಿ ಮಾತಾಡುವಾಗ, ಆತನ ಮಾತುಗಳ ಬಗ್ಗೆ ಗಮನಕೊಡದೆ, ಆ ವಿಶಯದ ಪೂರ್ವಾಪರಗಳನ್ನು ಯೊಚಿಸಲು ಶುರುಮಾಡಿರುತ್ತೇವೆ, ಯಾಕೆಂದರೆ ಎದುರಾಳಿ ಮಾತು ನಿಲ್ಲಿಸಿದ ತಕ್ಷಣ ನಾವು ಅವನಿಗೆ ತಕ್ಕ ಉತ್ತರ ಕೊಡಬೇಕಲ್ಲವೇ? ನಮಗೆ ಎದುರಾಳಿಗಿಂತ ಹೆಚ್ಚಿನ ತಿಳುವಳಿಕೆ ಇದೇ ಎಂದು ತೊರಿಸಿಕೊಳ್ಳಬೇಕಲ್ಲವೇ? ಈ ಬಗೆಯ ಕೇಳಿಸಿಕೊಳ್ಳುವಿಕೆ ಕೂಡಾ ಗೊಂದಲ ತೊಂದರೆಗಳಿಗೆ ಎಡೆ ಮಾಡಿಕೊಡಬಹುದು.
ಸರಿಯಾದ ಕೇಳಿಸಿಕೊಳ್ಳುವಿಕೆ, ಮನುಷ್ಯನ ಜೀವನಕ್ಕೆ ಅತ್ಯವಶ್ಯಕ, ಹಾಗೆ ಎಲ್ಲರೂ ರೂಢಿಸಿಕೊಳ್ಳಬಹುದಾದ ಗುಣ. ಈ ಸರಿಯಾದ ಕೇಳಿಸಿಕೊಳ್ಳುವಿಕೆ, ನಾವು ಈ ಕ್ಷಣದಲ್ಲಿ ಬದುಕುವುದನ್ನು ಕಲಿಸುತ್ತದೆ ಹಾಗೆಯೆ ನಾವು ಘಾಢವಾಗಿ ಈ ಕ್ಷಣದಲ್ಲಿ ಬದುಕಿದರೆ ಕೇಳಿಸಿಕೊಳ್ಳುವಿಕೆ ತನಗೆ ತಾನೆ ಸರಿಯಾಗಿರುತ್ತದೆ.