jump to navigation

ಪೂರ್ಣವ ಕೊಡದೆ ಪೂರ್ಣವ ಪಡೆವುದೆಂತು? ಡಿಸೆಂಬರ್ 30, 2007

Posted by Bala in ಸಣ್ಣಕತೆ.
Tags:
1 comment so far

ನಾನು ಈ ಇಳಿವಯಸ್ಸಿನಲ್ಲಿ ಮನೆಯಲ್ಲಿ ಕಾಲ ಕಳೆಯುವುದಕ್ಕಿನ್ನ ಮನೆಯ ಪಕ್ಕದಲ್ಲಿದ್ದ ಪಾರ್ಕಿನಲ್ಲಿ ಹೆಚ್ಚು ಕಾಲ ಕಳೆಯುತಿದ್ದೇನೆ ಅನಿಸುತಿದ್ದೆ, ಹಾಗೆ ನೋಡಿದರೆ ತೀರಾ ಇತ್ತೀಚಿನವರೆಗೂ ನನ್ನ ಜೀವಮಾನವೆಲ್ಲ ಮನೆಯ ಹೊರಗೇ ಕಳೆದಿದ್ದೇನೆ. ಮಕ್ಕಳು ಪ್ರಿಂಟಿಗ್ ಪ್ರೆಸ್ ನೊಡಿಕೊಳ್ಳಲು ಶುರು ಮಾಡಿದ ಮೇಲೆ, ಮೈಯಲ್ಲಿ ಎಂದಿನಂತೆ ಆರೊಗ್ಯವಿಲ್ಲದೆ ಮೂರು ಹೊತ್ತು ಮನೆಯಲ್ಲಿರಬೆಕಾಗಿದೆ. ಆದರೆ ಉಸಿರುಗಟ್ಟುವ ಮನೆಯ ವಾತಾವರಣ, ಅಥವಾ ಎಂದೂ ಮನೆಯಲ್ಲಿ ಇರದ ಕಾರಣವೊ ಎನೊ, ನಾನು ಹೆಚ್ಚು ಹೊತ್ತು ಪಾರ್ಕಿನಲ್ಲಿ ಕಳೆಯುವಂತಾಗಿದೆ. ಮನೆಯಲ್ಲಿ ಹೆಂಡತಿ ಮಕ್ಕಳಿಗೆ, ನನ್ನ ಬಗ್ಗೆ ಅಸಡ್ಡೆ, ಹಾಗೆಂದು ನನ್ನ ಬೇಕು ಬೇಡಗಳಾವುದನ್ನೂ ನನ್ನ ಮನೆಯವರು ನಿರಾಕರಿಸಿಲ್ಲ, ಆದರೆ ನನ್ನೊಡನೆ ಯಾರಿಗೂ ಆತ್ಮೀಯತೆಯಿಲ್ಲ. ಪದ್ಮ ನನ್ನೊಡನೆ ಮಾತಾಡುವುದನ್ನು ನಿಲ್ಲಿಸಿ ವರ್ಷಗಟ್ಟಲೆ ಯಾಗಿದೆ. ವಿಜಯ ವಿಕ್ರಮರು ನನ್ನೊಡನೆ ವ್ಯವಹಾರಕ್ಕೆ ಎಷ್ಟು ಬೇಕೊ ಆಷ್ಟು ಮಾತು. ಈ ಇಳಿವಯಸ್ಸಿನಲ್ಲಿ ಎಲ್ಲಾ ಇದ್ದೂ ಎನೂ ಇಲ್ಲದವನಂತಿದ್ದೇನೆ.

ಬೆಳಿಗ್ಗೆ ಮನೆಯಿಂದ ಹೊರಟು ಪಾರ್ಕಿನ ಕಡೆ ನಡೆಯುತಿದ್ದಾಗ, ಏನು ಶ್ಯಾಮಣ್ಣೋರು ಗಾಳಿಸೇವನೆಗೆ ಹೊರಟಹಾಗಿದೆ, ಪರಿಚಯದವರು ದಾರಿಯಲ್ಲಿ ಕೇಳಿದರು, ಎದುರುತ್ತರವಾಗಿ, ಸಣ್ಣಗೆ ನಕ್ಕು ಮುಂದುವರೆದೆ. ಸುಬ್ಬು, ನನ್ನ ಬಾಲ್ಯ ಸ್ನೇಹಿತ ದಾರಿಯಲ್ಲಿ ನನ್ನನ್ನು ಕೂಡಿಕೊಂಡ, ಪಾರ್ಕಿನ ಕಡೆ ಹೆಜ್ಜೆ ಹಾಕುತಿದ್ದೆವು. “ಸುಬ್ಬು, ನಾನು ಈಗಿರುವ ಸ್ಥಿತಿಗೆ ನಾನೆ ಕಾರಣ, ಏನಂತೀಯಾ”, ಈ ಪ್ರಶ್ನೆಯನ್ನು ಹಲವಾರು ಬಾರಿ ಕೇಳಿದ್ದೆ, ನನ್ನನು ಚೆನ್ನಾಗಿ ಬಲ್ಲ ಸುಬ್ಬು ಎಂದಿನಂತೆ ಮೌನವಾಗಿ ನಡೆಯತೊಡಗಿದ. ನನ್ನಲ್ಲಿದ್ದ ಅಳುಕು ನನ್ನನ್ನು ಕಾಡತೊಡಗಿತು. ನಾನು ಸುಬ್ಬು ಮೌನವಾಗಿಯೆ, ಪಾರ್ಕಿನಲ್ಲಿ ಎರಡು ಸುತ್ತು ನಡೆದು, ಸ್ವಲ್ಪ ಹೊತ್ತು ಬೆಂಚಿನ ಮೇಲೆ ಕುಳಿತಿದ್ದೆವು. ಸುಬ್ಬು ಮೌನವಾಗಿದ್ದರೂ, ಅವನ ಮನಸ್ಸು ಹೇಳುತಿದ್ದುದು ನನಗೆ ಕೇಳಿಸುತ್ತಿದೆ. ಸುಬ್ಬು ನಾನು ವಾರಕ್ಕೊಮ್ಮೆಯದರೂ ಬಾರಿನಲ್ಲಿ ಕುಳಿತು ಹರಟೇ ಹೊಡೆಯುತಿದ್ದು ಬಾಲ್ಯದಿಂದಲೂ ನಡೆದು ಬಂದಿದ್ದು. ನನ್ನ ಸ್ವಭಾವ ವನ್ನು ಚೆನ್ನಾಗಿ ಅರಿತಿದ್ದ ಸುಬ್ಬು ಯಾವಗಲೂ ಹೇಳುತ್ತಿದ್ದ, ಮನೆಯಕಡೆ ಗಮನಕೊಡೊ, ಪದ್ಮಳಿಗೆ ತಕ್ಕ ಗಂಡನಾಗು, ನಿನ್ನ ಮಕ್ಕಳಿಗೆ ತಂದೆಯತನವನ್ನು ತೋರಿಸಿಕೊಡೊ. ನನಗೆ ಅವನು ಹೇಳುತ್ತಿದ್ದುದರ ಅರ್ಥ, ಆಗ ಆಗಿರಲಿಲ್ಲ, ಈಗ ಅನುಭವಿಸುತಿದ್ದೇನೆ. ಸ್ವಲ್ಪ ಹೊತ್ತಿನ ನಂತರ ಇಬ್ಬರೂ ಮನೆಯಕಡೆ ನಡೆದೆವು, ಮಾರ್ಗದಲ್ಲಿ, ಸುಬ್ಬು ಎಂದಿನಂತೆ ತನ್ನ ಮನೆಯ ಕಡೆ ತಿರುಗಿದ. ನಾನು ಮನೆಗೆ ಬಂದೆ, ಪದ್ಮ ಆಡುಗೆ ಮನೆಯಲ್ಲಿ ಆಡುಗೇ ಮಾಡುತಿದ್ದದ್ದು ಕಾಣಿಸಿತು. ನನ್ನ ರೂಮಿಗೆ ಬಂದು, ಶರಟನ್ನು ಬಿಚ್ಚಾಕಿ, ದೊಡ್ಡ ಆಕಳಿಕೆ ಬಂದು ಮಂಪರು ಕವಿದಂತಾಗಿ ಹಾಗೆ ಮಂಚದ ಮೇಲೆ ಒರಗಿಕೊಂಡೆ.

ನಾನು ಒಬ್ಬನೇ ಮಗನಾದದ್ದರಿಂದ, ಯಾವುದಕ್ಕೂ ಕೊರತೆಯಿಲ್ಲದೆ ಬಹಳ ಮುದ್ದಿನಿಂದ ಸಾಕಿದ್ದರು. ಕಾಲೇಜಿಗೆ ಸೇರಿದಾಗ, ಅಮ್ಮ ನಾನು ಕೇಳಿದ ಬೈಕ್ ಕೊಡಿಸಿದ್ದರು. ಯಾರವಳು ನನ್ನ ಮೊದಲನೇ ಗೆಳತಿ, ನಳಿನಿಯಿರಬೇಕು, ನನ್ನನ್ನ ಮೇಲೆ ಬಿದ್ದು ಮಾತಾಡಿಸಿಕೊಂಡು ಬರುತಿದ್ದಳು, ಒಮ್ಮೆ ಮೂವಿ ನೊಡಲು ಬರ್ತೀಯಾ, ಎಂದು ಕೇಳಿದಾಗ, ಹಿಂದು ಮುಂದು ನೋಡದೆ ಬೈಕ್ ಏರಿ ಕುಳಿತಳು. ಅಲ್ಲಿಂದ ಶುರುವಾದದ್ದು, ನನ್ನ ದಿನಚರಿಯಲ್ಲಿ ಗೆಳತಿಯರ ಸಂಖ್ಯೆ ಬೆಳೆಯುತ್ತ ಹೋಯಿತು, ಯಾರಿಗೂ ಅಂಟಿಕೊಳ್ಳದೆ ಒಂದು ಹೂವಿನಿಂದ ಮತ್ತೊಂದು ಹೂವಿಗೆ ಹಾರುವು ದುಂಬಿಯಂತೆ ಬೆಳೆಯತೊಡಗಿದೆ. ನಾನು ಅರಿತುಕೊಳ್ಳುವ ಮೊದಲೇ ಈ ಹುಚ್ಚು ನನ್ನನಾವರಿಸಿತ್ತು. ಕಾಲೇಜು ಮುಗಿದು, ಅಪ್ಪನ ಪ್ರಿಂಟಿಂಗ್ ಪ್ರೆಸ್ ನೋಡಿಕೊಳ್ಳಲಾರಂಬಿಸಿದರೂ, ನನ್ನ ಹುಚ್ಚು ಬೆಳೆಯುತ್ತಲೇ ಹೋಯಿತು.

ಈ ಮಧ್ಯ ಅಪ್ಪ ಅಮ್ಮ, ಮದುವೆಯಾಗು ಎಂದು ನನ್ನನು ಪೀಡಿಸಲಾರಂಭಿಸಿದರು. ನನಗೆ ಮದುವೆ ಬೇಕಿಲ್ಲದಿದ್ದರೂ, ಬೇಡ ಎನ್ನುವದಕ್ಕೂ ಯಾವ ಕಾರಣವಿಲ್ಲದ್ದರಿಂದ, ಮದುವೆಯಾಗಲು ಒಪ್ಪಿದ್ದೆ. ನೋಡಲು ಸುಂದರವಾಗಿದ್ದ ಪದ್ಮಳನ್ನು ನನಗೆ ತೋರಿಸಿದರು, ನಾನು ಒಪ್ಪಿದೆ. ಪದ್ಮಳೊಡನೆ ನನ್ನ ಮದುವೆಯಾಯಿತು. ಪದ್ಮಳೊಡನೆ ನಾನು ಯಾವತ್ತೂ ಅತ್ಮೀಯತೆಯಿಂದ ಒಬ್ಬ ಸಾಮಾನ್ಯ ಗಂಡನಂತೆ ನಡೆದುಕೊಳ್ಳಲೇ ಇಲ್ಲ. ಇವಳು ಒಂದು ಹೂವು ಮಾತ್ರವಾಗಿದ್ದಳು. ಪದ್ಮ ಮೊದಮೊದಲು ನನ್ನಿಂದ ಬದಲಾವಣೆಯನ್ನು ಬಯಸಿ, ನನ್ನೊಡನೆ ಜಗಳವಾಡುತಿದ್ದಳು. ನನ್ನನ್ನು ಹೊರಗಡೆ ಕರೆದುಕೊಂಡು ಹೋಗಿ, ನಿಮ್ಮ ಮನಸ್ಸಿನಲ್ಲಿರುವುದನ್ನೆಲ್ಲಾ ಹೇಳಿ ಎಂದು ಪ್ರಾಣ ಹಿಂಡುತಿದ್ದಳು. ನಾನೊ ಕಲ್ಲಿನಂತಿದ್ದೆ, ನನಗೆ ಬರಿ ಪಡೆದುಕೊಳ್ಳುವುದು ಮಾತ್ರ ಗೊತ್ತಿತ್ತು, ಕೊಡುವುದನ್ನು ಎಂದೂ ಕಲಿಯಲೇ ಇಲ್ಲ. ಕ್ರಮೇಣ ನನ್ನ ಎಲ್ಲ ಬಣ್ಣಗಳನ್ನು ಅರಿತ ಅವಳು, ಮೌನದ ಮೊರೆಹೋಗಿಬಿಟ್ಟಳು. ಈ ಮಧ್ಯ ವಿಜಯ, ವಿಕ್ರಮರು ಹುಟ್ಟಿದ್ದು, ಬೆಳೆದಿದ್ದು ನನ್ನ ಗಮನಕ್ಕೆ ಅಷ್ಟಾಗಿ ಬರಲೇ ಇಲ್ಲಾ. ನಾನು ಅವರಿಗೆ ತಂದೆಯಾಗಿದ್ದರೆ ತಾನೆ ಅದೆಲ್ಲಾ ತಿಳಿಯುತಿದ್ದುದು, ಅವರು ಏನು ಒದುತಿದ್ದಾರೆಂದು ಕೂಡ ತಿಳಿದುಕೊಳ್ಳಲು ಪ್ರಯತ್ನಿಸಿರಲಿಲ್ಲ. ಮೂರುಹೊತ್ತು, ಪ್ರಿಂಟಿಂಗ್ ಪ್ರೆಸ್ ಮತ್ತು ನನ್ನ ಗೆಳತಿಯರು, ನೀರಿನಂತೆ ಹಣ ಕರ್ಚಾಗುತಿತ್ತು, ಕೂತು ತಿನ್ನುವಷ್ಟು ಹಣವಿದ್ದುದರಿಂದ, ನನಗೆ ಕೊರತೆ ಕಾಣಿಸಲಿಲ್ಲ. ಕ್ರಮೇಣ ವಯಸ್ಸಾದಂತೆ, ಎಂದೂ ಯಾರಿಗು ಆಂಟಿಕೊಳ್ಳದ ನನಗೆ, ಈಗ ಸಂಬಂದಗಳು ಬೇಕೆನಿಸುತ್ತಿದೆ, ಗಂಡನಾಗಬೇಕು, ತಂದೆಯಾಗಬೇಕೆನಿಸುತ್ತಿದೆ. ಈಗ ನನಗೆ ಅತ್ಮೀಯತೆಯ ಅಗತ್ಯ ಕಾಣಿಸುತ್ತಿದೆ, ನಾನು ಬದುಕಿರಲು, ನನ್ನ ಉಸಿರಿನೊಡನೆ ನನ್ನನ್ನು ಆತ್ಮೀಯವಾಗಿ ನೊಡುವು ಕಣ್ಣುಗಳು, ಮಾತಾಡುವ ಬಾಯಿಗಳು, ಕೇಳುವ ಕಿವಿಗಳು ಬೇಕೆನಿಸುತ್ತಿದೆ. ಆದರೆ ಈ ಬೇಕುಗಳು ಈಗ ನನಗೆ ಸಿಗದಷ್ಟು ದೂರ ಹೋಗಿಬಿಟ್ಟಿದ್ದೀನಿ ಎಂಬ ಅರಿವು ಬಂದು ಕಣ್ಣಿನಲ್ಲಿ ನೀರು ತುಂಬಿಕೊಂಡಿತು.

ಅಕ್ಕಿಯೊಳಗನ್ನವನು ಮೊದಲಾರು ಕಂಡವರು ಡಿಸೆಂಬರ್ 25, 2007

Posted by Bala in ಬದುಕು.
Tags: ,
add a comment

ಅಕ್ಕಿಯೊಳಗನ್ನವನು ಕಂಡುಹಿಡಿದ ಆ ಅನಾಮದೇಯ ಮಹಾನ್ ವ್ಯಕ್ತಿಗೆ ಕೊಟಿ ನಮಸ್ಕಾರ. ಇವತ್ತು ಅಕ್ಕಿಯಿಲ್ಲದೇ ಬದುಕೇ ಇಲ್ಲಾ ಎಂದು ಹೇಳಬಹುದು, ಅಕ್ಕಿ ನಮ್ಮ ಬದುಕಿನಲ್ಲಿ ಎಷ್ಟು ಹಾಸುಹೊಕ್ಕಾಗಿದೆಯೆಂದರೆ ನಾವು ದಿನದ ಮೂರು ಹೊತ್ತು ಒಂದಲ್ಲಾ ಒಂದು ಅಕ್ಕಿಯಿಂದಾದ ಅಹಾರವನ್ನು ತಿನ್ನುತ್ತೇವೆ. ಅಕ್ಕಿಯಿಂದ ಮಾಡಿರದ ಆಹಾರವನ್ನು ಬಿಟ್ಟು ನಮ್ಮ ಊಟವನ್ನು ನೆನೆಸಿಕೊಳ್ಲಲು ಸಾಧ್ಯವಿಲ್ಲ. ಯಾವುದೇ ದೇಶದ, ಯಾವುದೇ ಬಗೆಯ ಊಟಮಾಡಿದರು, ಅನ್ನವಿಲ್ಲದೆ ನಮಗೆ ಊಟ ಸಂಪೂರ್ಣವಾದಂತೆನಿಸುವುದಿಲ್ಲ, ಕನಿಷ್ಟ ಪಕ್ಷ ಕೊನೆಯಲ್ಲಿ ಮೊಸರನ್ನವಿರಲೇಬೇಕು. ನಮಗೆ ಮೃಷ್ಟಾನ್ನ ಭೋಜನವಿಲ್ಲದಿದ್ದರೂ ತೊಂದರೆಯಿಲ್ಲ, ಅನ್ನ, ತುಪ್ಪಾ ಉಪ್ಪು ಮೆಣಸಿದ್ದರೆ ಸಾಕು, ಮನಃಪೂರ್ವಕವಾಗಿ ಊಟಮಾಡಲು.

ದ್ರಾವಿಡದ ವಾರಿ ಪದ ತಮಿಳಿನಲ್ಲಿ ಅರಿಸಿ ಯಾಗಿ ಕನ್ನಡದಲ್ಲಿ ಅಕ್ಕಿಯಾಗಿದೆ ಎನ್ನುತ್ತಾರೆ. ದ್ರಾವಿಡದ ವಾರಿ ಪದದಿಂದಲೇ ಸಂಸ್ಕೃತದ ವ್ರೀಹಿ (ಭತ್ತ, ಅಕ್ಕಿ ಅಥವಾ ಧಾನ್ಯ) ಪದ ಬಂದಿರಬಹುದು ಎನ್ನುತ್ತಾರೆ. ವೇದಗಳಲ್ಲಿ ಅಕ್ಕಿಯನ್ನು ಕುರಿತಾದ ಮಂತ್ರಗಳಿವೆ. ಕುಮಾರವ್ಯಾಸನ ಭಾರತಕಥಾಮಂಜರಿಯಲ್ಲಿ, ಭೀಮ ಬಕಾಸುರನಿಗಾಗಿ ಬಂಡಿ ಊಟವನ್ನು  ಕೊಂಡೊಯ್ಯಲು ಸಿದ್ದನಾಗಿ, ಬೀಳ್ಕೊಡಲು ಬಂದ ಜನರೆಲ್ಲ ಹೋದಮೇಲೆ, ಅನ್ನದ ಉಂಡೆಯನ್ನು ಮಾಡಿ ಸಾರಿನಲ್ಲಿ ಅದ್ದಿ ಮೇಲಕ್ಕೆಸದು ಬಾಯನ್ನು  ಅಗಲಿಸಿ ಕ್ಯಾಚ್ ಹಿಡಿಯುತ್ತಾ ಊಟ ಮಾಡಿದನೆಂದು ಓದಿದ ನೆನಪು.

ಅಕ್ಕಿಯಿಂದಾದ ಆಡುಗೆಗಳೆಂದರೆ, ಇಡ್ಲಿ , ದೋಸೆ (ದೋಸೆಯಲ್ಲಿ ಹಲವಾರು ಬಗೆ , ಮಸಾಲೆ ದೋಸೆ, ಈರುಳ್ಳಿದೋಸೆ, ಉತ್ತಾಪ, ಹಸಿರುಕಾಳಿನ ದೋಸೆ, ಇತ್ಯಾದಿ), ಅಕ್ಕಿರೊಟ್ಟಿ,, ಅನ್ನ (ಅನ್ನವನ್ನು ಮೂಲವಾಗುಳ್ಳ ಕೆಲವು ಆಡಿಗೆಗಳೆಂದರೆ, ಚಿತ್ರಾನ್ನ, ಮೊಸರನ್ನ, ಬಿಸಿಬೇಳೆಬಾತ್, ವಾಂಗೀಬಾತ್, ಪುಳಿಯೊಗರೆ ಇತ್ತ್ಯಾದಿ). ಅಕ್ಕಿಯಲ್ಲಿರುವ ವಿಟಮಿನ್ ಮತ್ತು ಖನಿಜಾಂಶಗಳೆಂದರೆ ಫೈಬರ್, ಶರ್ಕರ, ಪ್ರೋಟೀನ್, ವಿಟಮಿನ್ ಬಿ , ಇ ಮುಂತಾದುವುಗಳು.

ಅಕ್ಕಿ ನಮ್ಮ ಸಂಸ್ಕೃತಿಯಲ್ಲಿ ಅತಿ ಮುಖ್ಯ ಸ್ಥಾನವನ್ನು ಪಡೆದುಕೊಂಡಿದೆ. ಮಗುವಿಗೆ ಉಣಿಸುವ ಮೊದಲ ಊಟದ ಶಾಸ್ತ್ರ ಅನ್ನಪ್ರಾಶನ. ಮದುವೆಯಲ್ಲಂತೂ ತುಂಬಿದ ತಟ್ಟೆಗಳಲ್ಲಿ ಅಕ್ಕಿ ಎಲ್ಲೆಲ್ಲೂ ತಾಂಡವವಾಡುತ್ತಿರುತ್ತದೆ. ಗಂಡು ಹೆಣ್ಣು ಒಬ್ಬರ ತಲೆಯ ಮೇಲೆ ಇನ್ನೊಬ್ಬರು ಅರಿಶಿಣ ಹಚ್ಚಿದ ಅಕ್ಕಿಯನ್ನು ಎರಡುಕೈಗಳಲ್ಲಿ ಹಿಡಿದು ಹಾಕುವುದು. ಧಾರೆಯೆರೆಯಲು ಬಂದವರು, ಹಾಲನ್ನು ಬಿಟ್ಟನಂತರ ಅಕ್ಷತೆಯನ್ನು ಗಂಡು ಹೆಣ್ಣಿನ ಮೇಲೆ ಹಾಕುವುದು. ತಾಳಿಕಟ್ಟುವ ಸಮಯದಲ್ಲಿ ಗಟ್ಟಿ ಮೇಳದೊಂದಿಗೆ ಮದುವೆಯಲ್ಲಿ ನೆರೆದೆದ್ದ ಎಲ್ಲರೂ ಅಕ್ಷತೆ ಯನ್ನು ಗಂಡು ಹೆಣ್ಣಿನ ಮೇಲೆ ಎರಚುವುದು. ಇಡೀ ಮದುವೆಮನೆಯಲ್ಲಿ ಅಕ್ಕಿ ಎಲ್ಲೆಲ್ಲೂ ಎರಚಾಡಿರುವುದು ಶುಭದ ಸಂಕೇತ. ಅಕ್ಕಿ ಯನ್ನು ಮದುವೆಯಲ್ಲಿ ಉಪಯೋಗಿಸಿರುವುದು ಮದುವೆಯಾದವರು ಸಂತಾನವನ್ನು ಮುಂದುವರೆಸಲಿ ಎಂಬ ಪಲವತ್ತತೆಯ ಸಂಕೇತವಾಗಿ ಎನ್ನುತ್ತಾರೆ. ಕೊನೆಗೆ ಸತ್ತವರಿಗೆ ಇಡುವ ಪಿಂಡ ಅಕ್ಕಿಯಿಂದ ಮಾಡಿದ್ದು.

ಅಮರಳಾದಳು ಓಬವ್ವ ಚಿತ್ರದುರ್ಗದ ಓಬವ್ವ ಡಿಸೆಂಬರ್ 21, 2007

Posted by Bala in ಬದುಕು.
Tags:
add a comment

ನಾಗರಹಾವು ಚಿತ್ರದ “ಕನ್ನಡ ನಾಡಿನ ವೀರರಮಣಿಯ ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ”, ಗೀತೆಯನ್ನು ಗುನುಗಿಕೊಳ್ಳುವಾಗಲೆಲ್ಲಾ, “ಸತ್ತವರನ್ನು ಎಳೆದು ಹಾಕುತ ಮತ್ತೆ ನಿಂತಳು ಹಲ್ಲು ಮಸೆಯುತ”, ಎಂಬ ಸಾಲಿಗೆ ಬಂದಾಗ ಮನಸ್ಸು ಗದ್ಗದಿತವಾಗುತ್ತದೆ, ಹಾಡು ಮುಂದುವರಿಯದೆ ಗಂಟಲಲ್ಲೆ ಹೂತುಹೋಗುತ್ತದೆ. ಒಂದು ಅಸಾಮಾನ್ಯವಾದ ವ್ಯಕ್ತಿತ್ವ ಕಣ್ಣ ಮುಂದೆ ಹಾದುಹೋಗಿ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತದೆ. ಮಾಂತ್ರಿಕ ನಿರ್ದೇಶಕ ಪುಟ್ಟಣ್ಣ ಕಣಗಾಲರ ನಾಗರಹಾವು ಚಿತ್ರದಲ್ಲಿ, ಜಯಂತಿಯವರು ತಮ್ಮ ಅಮೋಘವಾದ ಅಭಿನಯದಿಂದ, ನಿಜವಾದ ಓಬವ್ವನನ್ನೂ ನಮ್ಮ ಕಣ್ಣ ಮುಂದೆ ಜೀವಂತವಾಗಿಟ್ಟಿದ್ದಾರೆ. ಈ ಹಾಡನ್ನು  ನೆನೆಸಿಕೊಂಡರೆ ಮೈಯೆಲ್ಲಾ ಜುಮ್ಮೆನ್ನುತ್ತದೆ, ರೋಮರೋಮಗಳು ನಿಮಿರಿನಿಂತು, ಕೊನೆಗೆ ಓಬವ್ವನ ಸಾವು ನಮ್ಮ ಕಣ್ಣಲ್ಲಿ ನೀರು ತುಂಬಿಸುತ್ತದೆ. ಕೆಲವೇ ಗಂಟೆಗಳಲ್ಲಿ ಮಿಂಚಿ ಮರೆಯಾದ ಓಬವ್ವ ಕನ್ನಡ ನಾಡಿನ ಇತಿಹಾಸದಲ್ಲಿ ಯಾವಾಗಲು ಮಿನುಗುವ ನಕ್ಷತ್ರ.

ಇಲ್ಲಿ ಒಂದು ವಿಶಯವನ್ನು ನಾವು ಗಮನಿಸಬೇಕು, ಒಬ್ಬ ಸೈನಿಕ ಮೊದಲೆ ತಿಳಿದ ಯುದ್ದಕ್ಕೆ ಹೋಗಿ ವೀರೊಚಿತವಾಗಿ ಹೋರಾಡಿ ವೈರಿಗಳನ್ನು ನಾಶಪಡಿಸಿ, ಕೊನೆಗೆ ತಾನೂ ಸಾವನ್ನಪ್ಪುವುದು ವಿಶೇಷವಾದ ವ್ಯಕ್ತಿತ್ವವೇ ಹೌದು. ಆದರೆ ಇಲ್ಲಿ, ತಾನು ಯುದ್ದಕ್ಕೆ ಹೊರಡಬೇಕು, ಅಲ್ಲಿಂದ ತಾನು ಹಿಂದೆ ಬರದೇ ಇರಬಹುದು ಎಂಬುದು ಸೈನಿಕನಿಗೆ ಮೊದಲೇ ತಿಳಿದಿರುತ್ತದೆ ಮತ್ತು ಸೈನಿಕ ಅದಕ್ಕೆ ಬೇಕಾದ ಮಾನಸಿಕ ಸಿದ್ದತೆಯೊಂದಿಗೆ ಯುದ್ದಕ್ಕೆ ಹೊರಡುತ್ತಾನೆ. ಸೈನಿಕನ ವೀರೊಚಿತವಾದ ಹೋರಾಟ ಮಹಾನ್ ಕಾರ್ಯವೇ ಸರಿ, ಅದರಲ್ಲಿ ಎರಡು ಮಾತಿಲ್ಲ. ಆದರೆ ನಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡುವುದು, ಓಬವ್ವ ಒಬ್ಬ ಸಾಮಾನ್ಯ ಮಹಿಳೆ, ಒಂದು ಕ್ಷಣದ ಹಿಂದೆ ತೃಪ್ತಿಯಿಂದ ತನ್ನ ಗಂಡನಿಗೆ ಊಟ ಬಡಿಸಿ, ಆತನಿಗೆ ಕೊಡಲು ನೀರಿಲ್ಲದಿರುವುದನ್ನು ಗಮನಿಸಿದಂತ ಸಾಮಾನ್ಯ ಹೆಣ್ಣು ಮಗಳು.ಆದರೆ ವೈರಿಯ ಪಿಸುಮಾತನ್ನು ಕೇಳಿದೊಡನೆಯೆ ಎಂತಹ ಅಸಾಮಾನ್ಯ ಸ್ಥಿತಿಗೇರಿದಳೆಂದರೆ, ಸ್ವತಃ ಅಕೆಯೆ ಹಿಂದೆ ಎಂದೂ ಎಣಿಸಿರದಂತಹ ಅಸಾಮಾನ್ಯ ಸ್ಥಿತಿ. ಆಕೆ ಹಿಡಿದದ್ದು ಆಕೆ ಯಾವಗಲೂ ಬಳಸುವ ಒನಕೆ, ಈ ಒನಕೆ ಕೂಡ ಅಸಾಮಾನ್ಯ ಆಯುಧವಾಗಿ ಪರಿಣಮಿಸಿತು. ಇದೆಲ್ಲಾ ನಡೆಯುವುದು ಕೇವಲ ಕ್ಷಣಗಳ ಅಂತರದಲ್ಲಿ. ಒಂದು ಸಾಮಾನ್ಯ ಚೇತನ ಇನ್ನೊಂದು ಕ್ಷಣದಲ್ಲಿ ಅಸಾಮಾನ್ಯ ಚೀತನವಾಗಿ ಬೆಳೆಯುವುದು ನಿಜಕ್ಕೂ ಆಶ್ಚರ್ಯ ಹುಟ್ಟಿಸುವಂತಹುದಾದರೂ ಅದು ಸಾಧ್ಯ ಎಂದು ತೋರಿಸುತ್ತಿದೆ.

ಬದುಕಿದ್ದಾಗಲೇ ಸತ್ತ ಗಿಳಿಯ ಕತೆ ಡಿಸೆಂಬರ್ 16, 2007

Posted by Bala in ಬದುಕು.
Tags:
2 comments

ಬಹಳ ಹಿಂದೆ, ಭಾರತದ ಒಬ್ಬ ವ್ಯಾಪಾರಿ ವ್ಯಾಪಾರದ ಸಲುವಾಗಿ ಆಫ್ರಿಕಾದೇಶಕ್ಕೆ ಹೊಗಿದ್ದ. ಆಲ್ಲಿದ್ದ ಕಾಡಿನಲ್ಲಿ ವಿಹರಿಸುವಾಗ, ಆತನಿಗೆ ಬಣ್ಣ ಬಣ್ಣಗಳಿಂದ ಅಲಂಕೃತವಾದ, ಸುಂದರವಾದ ಮಾತಾಡುವ ಗಿಳಿಗಳ ಗುಂಪೊಂದು ಕಾಣಿಸಿತು. ಇವುಗಳಲ್ಲಿ ಒಂದು ಗಿಳಿಯನ್ನು ಹಿಡಿದು ತನ್ನ ಮನೆಗೆ ಒಯ್ಯಲು ನಿರ್ದರಿಸಿದ ವ್ಯಾಪಾರಿ. ಮಾತಾಡುವ ಗಿಳಿಯೊಂದಿಗೆ ಮನೆಗೆ ಹಿಂದಿರುಗಿದ ವ್ಯಾಪಾರಿ, ಗಿಳಿಯನ್ನು ಒಂದು ಪಂಜರದಲ್ಲಿ ಇಟ್ಟು ತನ್ನ ಸಾಕು ಪ್ರಾಣಿಯಂತೆ ಸಾಕಲಾರಂಭಿಸಿದನು. ಅದಕ್ಕೆ ಒಳ್ಳೆ ಹಣ್ಣು, ಬೀಜಗಳ ಊಟ ಕೊಟ್ಟು, ದಿನವೂ ಸಂಗೀತವನ್ನು ಕೇಳಿಸುತಿದ್ದ, ಒಟ್ಟಾರೆ ಗಿಳಿಯನ್ನು ಚೆನ್ನಾಗಿ ನೊಡಿಕೊಳ್ಳುತಿದ್ದನು.

ಕೆಲವು ವರ್ಷಗಳ ನಂತರ ವ್ಯಾಪಾರರ್ಥವಾಗಿ ವ್ಯಾಪಾರಿ ಮತ್ತೆ ಆಫ್ರಿಕಾದೇಶಕ್ಕೆ ಹೊಗಬೇಕಾಗಿ ಬಂದಾಗ, ಆತ ಗಿಳಿಯ ಹತ್ತಿರ ಹೊಗಿ, “ನಾನು ಮತ್ತೆ ನಿನ್ನ ತವರಿಗೆ ಹೋಗುತಿದ್ದೇನೆ, ನಿನ್ನ ಬಂಧು ಬಳಗ ಮತ್ತು ನಿನ್ನ ಸ್ನೇಹಿತರಿಗೆ ಏನಾದರೂ ಹೇಳಬೇಕೆಂದಿದ್ದರೆ ತಿಳಿಸು, ನಾನು ನಿನ್ನವರಿಗೆ ವಿಷಯ ತಲುಪಿಸುತ್ತೇನೆ ಎಂದ. ಆದಕ್ಕೆ ಗಿಳಿ, “ನಾನು ಇಲ್ಲಿ ನನ್ನ ಪಂಜರದಲ್ಲಿ ಪ್ರತಿದಿನವನ್ನೂ ತುಂಬಾ ಸಂತೋಷದಿಂದ ಕಳೆಯುತಿದ್ದೆನೆ ಎಂದು ಮತ್ತು ನನ್ನ ಶುಭಕಾಮನೆಗಳನ್ನು ನನ್ನವರಿಗೆ ತಿಳಿಸು”, ಎಂದು ಹೇಳಿತು.

ವ್ಯಾಪಾರಿ ಆಫ್ರಿಕಾದೇಶಕ್ಕೆ ತೆರಳಿ, ಗಿಳಿಯಿರುತಿದ್ದ ಕಾಡಿಗೆ ಹೋಗಿ, ಗಿಳಿಯ ಸಂದೇಶವನ್ನು ಅದರ ಬಂಧುಬಾಂದವರೂ ಮತ್ತು ಸ್ನೇಹಿತರಿಗೆ ತಿಳಿಸಿದ. ವ್ಯಾಪಾರಿ ಸಂದೇಶವನ್ನು ಹೇಳಿ ಮುಗಿಸುತಿದ್ದಂತೆ, ಅಲ್ಲಿದ್ದ ಒಂದು ಗಿಳಿ ತನ್ನ ಕಣ್ಣಿನಲ್ಲಿ ನೀರು ತುಂಬಿಕೊಂಡು, ಮರದ ಮೇಲಿಂದ ಕೆಳಗೆ ಬಿದ್ದು ಸತ್ತು ಹೋಯಿತು. ಇದನ್ನು ನೋಡಿದ ವ್ಯಾಪಾರಿ ಆಶ್ಚರ್ಯಚಕಿತನಾದರೂ, ಸತ್ತ ಗಿಳಿ ನನ್ನ ಮನೆಯಲ್ಲಿರುವ ಗಿಳಿಯ ಪ್ರಾಣಸ್ನೇಹಿತನಿರಬಹುದು, ಅದಕ್ಕೆ ಸ್ನೇಹಿತನ ನೆನಪಿನಿಂದ ಪ್ರಾಣ ಬಿಟ್ಟಿರಬೇಕು ಎಂದು ಕೊಂಡು ತನ್ನ ಪ್ರಯಾಣ ಮುಂದುವರೆಸಿದ.

ಮನೆಗೆ ಬಂದ ವ್ಯಾಪಾರಿ, ತನ್ನ ಪಂಜರದಲ್ಲಿದ್ದ ಗಿಳಿಗೆ, ಆಫ್ರಿಕಾದ ಕಾಡಿನಲ್ಲಿ ನಡೆದ ಘಟನೆಯನ್ನು ತಿಳಿಸಿದ. ವ್ಯಾಪಾರಿ ಮಾತು ಮುಗಿಯುತಿದ್ದಂತೆ, ಪಂಚರದಲ್ಲಿದ್ದ ಗಿಳಿಯ ಕಣ್ಣಿನಲ್ಲಿ ನೀರು ತುಂಬಿಕೊಂಡು, ದೊಪ್ಪನೆ ಬಿದ್ದು ಸತ್ತು ಹೋಯಿತು. ಇದನ್ನು ನೋಡಿದ ವ್ಯಾಪಾರಿ ದಿಗ್ಬ್ರಾಂತನಾದರೂ, ತನ್ನ ಸಾಕು ಗಿಳಿ, ಅದರ ಪ್ರಾಣಸ್ನೇಹಿತ ಸತ್ತ ವಿಷಯ ಕೇಳಿ, ತೀವ್ರವಾದ ದುಃಖದಿಂದ ತನ್ನ ಪ್ರಾಣ ಬಿಟ್ಟಿರಬೇಕು ಎಂದು ಕೊಂಡ. ನಂತರ ವ್ಯಾಪಾರಿ, ಪಂಜರವನ್ನು ತೆರೆದು, ಸತ್ತ ಗಿಳಿಯ ಕಳೆಬರಹವನ್ನು ತನ್ನ ಕೈಯಲ್ಲಿ ಎತ್ತಿಕೊಂಡು ಹೊರಗಡೆ ಹೋಗುತಿದ್ದಂತೆ, ಗಿಳಿ ಪುರ್ ಎಂದು ಆತನ ಕೈಯಿಂದ ತಪಿಸಿಕೊಂಡು ಹಾರಿಹೋಗಿ, ಅಲ್ಲಿಯೆ ಇದ್ದ ಮರದ ಕೊಂಬೆಯ ಮೇಲೆ ಕುಳಿತುಕೊಂಡಿತು.

ಮತ್ತೆ ಆಶ್ಚರ್ಯಚಕಿತನಾದ ವ್ಯಾಪಾರಿ, “ಹಾಗದರೆ ನೀನು ನಿಜವಾಗಿಯೂ ಸಾಯಲಿಲ್ಲ, ನನ್ನನ್ನು ಮೊಸಗೋಳಿಸಲು ಸತ್ತಂತೆ ನಾಟಕವಾಡಿದೆ, ಯಾಕೆ ಹೀಗೆ ಮಾಡಿದೆ” ಎಂದು ಗಿಳಿಯನ್ನು ಕೇಳಿದ. ಅದಕ್ಕೆ ಗಿಳಿ, “ನನ್ನ ತವರಿನ ಆ ಗಿಳಿ ನನಗೆ ಒಂದು ಮುಖ್ಯವಾದ ಸಂದೇಶವನ್ನು ಕಳಿಸಿತ್ತು”, ಎಂದಿತು. ಇನ್ನೂ ಆಶ್ಚರ್ಯದಿಂದ, “ಏನದು ಸಂದೇಶ ಆ ಗಿಳಿ ನಿನಗೆ ಕಳಿಸಿದ್ದು” ಎಂದ ವ್ಯಾಪಾರಿ. ಅದಕ್ಕೆ ಗಿಳಿ ಹೀಗೆಂದಿತು,” ನಾನು ಈ ಪಂಚರದಿಂದ ಪಾರಾಗಬೇಕಾದರೆ, ನಾನು ಬದುಕಿದ್ದಂತೆ ಸಾಯಬೇಕು, ಎಂಬುದೇ ಆ ಗಿಳಿಯ ಸಂದೇಶ”.

ಈ ಕತೆಯನ್ನು ನಾನು, ಡಾ.ವೆಯ್ನ್ ಡೈಯರ್ (Dr. Wayne Dyer) ಅವರ ಭಾಷಣದಲ್ಲಿ ಕೇಳಿದ್ದು.

ನಿರೀಕ್ಷೆ – ಒಂದು ಸಣ್ಣ ಕತೆ ಡಿಸೆಂಬರ್ 8, 2007

Posted by Bala in ಸಣ್ಣಕತೆ.
Tags:
5 comments

ನಾನು ನರಹರಿ ಮದುವೆಯಾಗಿ ಎಂಟು ವರುಷಗಳಾಯಿತು. ನರಹರಿ ನನಗೆ ಹೇಳಿ ಮಾಡಿಸಿದಂಥಾ ಗಂಡ, ನಮ್ಮಿಬ್ಬರದೂ ಅನ್ಯೋನ್ಯವಾದ ಸಂಬಂಧ, ನನಗಿದ್ದ ಒಂದೆ ಕೊರತೆಯೆಂದರೆ, ನಮಗೆ ಮಕ್ಕಳಿಲ್ಲ ಎಂಬುದು. ವೈದ್ಯರಿಗೆ ತೋರಿಸಿದ್ದಾಯಿತು, ದೋಷವಿರೊದು ನನ್ನಲ್ಲೆ ಎಂದು ಗೊತ್ತಾದ ದಿನದಿಂದ ಎನೋ ಒಂದು ರೀತಿ ಅಳುಕು, ದೋಷ ನನಲ್ಲಿದ್ದು ನನ್ನಿಂದ ನರಹರಿ ಕೂಡಾ ಮಕ್ಕಳಿಲ್ಲದ ಕೊರಗು ಕೊಡುತಿದ್ದೇನಲ್ಲಾ ಎಂಬ ದುಃಖ. ಕೊನೆಗೊಮ್ಮೆ ನರಹರಿಗೆ ಇನ್ನೊಂದು ಮದುವೆಯಾಗಲು ಸೂಚಿಸಿದಾಗ, “ನಿನಗೇನಾದರೂ ಬುದ್ದಿಗಿದ್ದಿಯಿದೆಯಾ? ಮಕ್ಕಳಾಗದಿದ್ದರೇನು, ನಾವಿಬ್ಬರು ಅನ್ಯೋನ್ಯವಾಗಿ ಕೊನೆವರಗೂ ನನಗೆ ನೀನು ನಿನಗೆ ನಾನು, ಜೀವನದಲ್ಲಿ ಇದಕ್ಕಿಂತ ಹೆಚ್ಚೀನನ್ನು ಬಯಸಿದವನಲ್ಲ, ಇನ್ನೆಂದೂ ಈ ರೀತಿ ಮಾತಾಡಬೇಡಾ” ಎಂದು ನನಗೆ ಚೆನ್ನಾಗಿ ಬೈದು ಹೇಳಿದ. ನರಹರಿಯ ಮಾತು ಕೇಳಿದಾಗ ಹೌದು ನಮಗಿನ್ನೇನು ಬೇಕು, ಯಾವುದಕ್ಕೂ ಕೊರತೆಯಿರಲಿಲ್ಲ, ಅದರೂ ನಮ್ಮಲ್ಲಿ ಎನಿಲ್ಲವೊ ಅದರ ಸೆಳೆತ ಹೆಚ್ಚಾಗಿ ಕೆಲವೊಮ್ಮೆ ನರಹರಿಯ ಮನಸ್ಸು ನೊಯಿಸಿದ್ದು ಇದೇ, ಅದಾದ ಮೇಲೆ ಕ್ಷಮೇ ಕೇಳಿ ಅತ್ತಿದ್ದೂ ಉಂಟು. ಪ್ರಪಂಚದಲ್ಲಿ ಎಷ್ಟೋ ವೈಚಿತ್ರಗಳು ನಡೆಯುತ್ತವಂತೆ, ಈ ವೈದ್ಯರ ಮಾತು ಸುಳ್ಳಾಗಿ ನನಗೆ ಮಗುವಾದರೆ.. ಆಲೋಚನೆಯಲ್ಲಿ ಮುಳುಗಿದ್ದಾಗ, ಯಾರೊ ಬಾಗಿಲು ಬಡಿದಂತಾಯ್ತು.

ಮಂಚದ ಮೇಲೆ ಮಲಗಿ ಯೋಚಿಸುತಿದ್ದ ನಾನು, ಎದ್ದು ಬಾಗಿಲು ತೆಗೆದರೆ ಶಾರದಮ್ಮನ ಮಗ ನಾಗು ಏದುಸಿರು ಬಿಡುತ್ತಾ ನಿಂತಿದ್ದ ಅವನನ್ನು ಕಂಡು, “ಏನಪ್ಪ” ಎಂದೆ. ಏದುಸಿರಿನಲ್ಲೆ, “ನಮ್ಮಮ್ಮ ನಿಮ್ಮನ್ನ ಈಗ್ಲೇ ಕರ್ಕೊಂಡ್ಬಾ ಅಂದ್ರು” ಎಂದ.
“ಯಾಕೊ” ಎಂದೆ.
ಅದಕ್ಕೆ “ನಂಗೊತ್ತಿಲ್ಲಾ” ಎಂದ.
ನನಗೆ ಮಾಡಲು ಏನೂ ಕೆಲಸವಿಲ್ಲದ್ದಿರಿಂದ, “ಬರ್ತೀನಿ ಅಂತ ಅಮ್ಮನಿಗೆ ಹೇಳು” ಎಂದೆ.
ತಕ್ಷಣ, ಮೆಟ್ಟಿಲಿಳಿದು ಓಡಿದ, ಅವನು ರಸ್ತೆ ತಿರುಗಿ ಮರೆಯಾಗುವವರೆಗೂ ಬಾಗಿಲಲ್ಲೆ ನೋಡುತ್ತಾ ನಿಂತೆ. ಅವನು ಓಡುವಾಗ ಸ್ಕೂಟರ ಒಡಿಸುವವನಂತೆ ಕೈ ಹಿಡಿದು ಪುರ್ ಎಂದು ಶಬ್ದ ಮಾಡುತ್ತಾ ಒಡುವುದನ್ನು ನೋಡಿ ನಗು ಬಂತು. ನಾಗು ಎಂಟು ವರ್ಷದ ಹುಡುಗ, ತೆಳು ಮೈಕಟ್ಟು, ಆಕರ್ಶಕ ಮುಖ, ಅವನನ್ನು ನೋಡಿದಾಗಲೆಲ್ಲಾ, ನನಗೂ ಇಂಥಾ ಒಬ್ಬ ಮಗನಿರಬಾರದಿತ್ತೇ ಎನಿಸುತಿತ್ತು.

ಬೆಂಗಳೂರಿಗೆ ಬಂದು ಎರಡು ವರುಷವಾಯಿತು, ಬಾಡಿಗೆ ಮನೆಯಲ್ಲಿ ನಾನೂ ನರಹರಿ ವಾಸ ಮಾಡುತಿದ್ದೆವು. ಬಂದ ಹೊಸತರಲ್ಲಿ ಯಾರೂ ಪರಿಚಯವಿರಲ್ಲ್ಲ. ನಾನು ತರಕಾರಿಗೆ ಹೋಗುವಾಗ, ಶಾರದಮ್ಮನ ಪರಿಚಯವಾಯಿತು. ಸ್ವಲ್ಪ ವಾಚಾಳಿಯಾದರೂ ಶಾರದಮ್ಮ ನನಗೆ ಬಲು ಹಿಡಿಸಿದರು. ಶಾರದಮ್ಮನ ಜೊತೆ ಮಾತಿಗೆ ಕುಳಿತರೆ ಹೊತ್ತು ಕಳೆಯುವುದೇ ತಿಳಿಯುತ್ತಿರಲಿಲ್ಲ. ನರಹರಿ ಕೆಲಸಕ್ಕೆ ಹೊದಮೇಲೆ, ಹೊತ್ತು ಕಳೆಯಲು ಶಾರದಮ್ಮನ ಮನೆಯ ಜಗುಲಿಮೇಲೆ ಕುಳಿತು ಹರಟೇ ಹೊಡೆ ಯುವುದು ನನ್ನ ನಿತ್ಯ ದಿನಚರಿಯಾಗಿತ್ತು. ನಾನು ಹೆಚ್ಚು ಮಾತಾಡುತ್ತಿರಲಿಲ್ಲ, ಅಲ್ಲಿ ಇರುತಿದ್ದ ಶಾರದಮ್ಮ ಹಾಗೂ ಇತರರು ಮಾತಾಡುವುದನ್ನು ಕೇಳುತ್ತಾ ಕುಳಿತಿರುತಿದ್ದೆ. ನಾನು ಏನೇ ಕೊಳ್ಳ ಬೇಕೆಂದಿದ್ದರೂ ಶಾರದಮ್ಮನನ್ನೂ ಕರೆದೊಯ್ಯುತಿದ್ದೆ, ಚೌಕಾಸಿ ಮಾಡುವುದರಲ್ಲಿ ಶಾರದಮ್ಮ ಎತ್ತಿದ ಕೈ. ಆತ್ಮೀಯರಾದ ಶಾರದಮ್ಮನ ಬಳಿ ನಾನು ಏನನ್ನೂ ಮುಚ್ಚಿಟ್ಟಿರಲಿಲ್ಲ. ಇಂದು ಯಾಕೆ ಹೇಳಿಕಳಿಸಿದರೋ ತಿಳಿಯಲ್ಲಿಲ್ಲ, ಹೋಗಿ ಬರೋಣವೆಂದು ಸೀರೆ ಸರಿಮಾಡಿಕೊಂಡು, ತಲೆ ಬಾಚಿಕೊಂಡು ಮನೆಗೆ ಬೀಗ ಹಾಕಿ ಶಾರದಮ್ಮನ ಮನೆಯ ಕಡೆ ಹೆಜ್ಜೆ ಹಾಕಿದೆ.

ಶಾರದಮ್ಮನ ಮನೆಯ ಜಗಲಿಯ ಮೇಲೆ ಗಡ್ಡಾಧಾರಿಯಾದ ಒಬ್ಬ ಬುಡುಬುಡಿಕೆಯವನು ಶಾರದಮ್ಮನ ಜೊತೆ ಮಾತಾಡುತ್ತಿರುವುದು ಕಂಡುಬಂತು. ಹತ್ತಿರ ಬಂದಾಗ, ಶಾರದಮ್ಮ ಕಣ್ಸನ್ನೆ ಮಾಡಿ ನನ್ನನ್ನು ಮನೆಯ ಒಳಗೆ ಕರೆದೊಯ್ದು, “ಈ ಬುಡುಬುಡಿಕೆಯವನು ಮಕ್ಕಳಿಲ್ಲದವರಿಗೆ ಮಕ್ಕಳಾಗುವಂತೆ ಮಾಟಮಾಡಿಸ್ತಾನಂತೆ, ಅವನು ಹೇಳಿದ್ದೆಲ್ಲಾ ಕೇಳಿದರೆ ನಂಬುವಂತಿದೆ, ನಿಮ್ಮ ಕಷ್ಟ ನೋಡಿ ನೋಡಿ, ನೀವು ಯಾಕೆ ಈತ ಹೇಳಿದಂತೆ ಮಾಡಬಾರದು, ಕಳೆದು ಕೊಳ್ಳುವುದೇನಿಲ್ಲಾ, ಕೊಂಚ ಹಣ, ದಾನ್ಯ, ಯೋಚಿಸಿ, ನೀವು ಹೂಂ ಅಂದರೆ ಅವನ ಬಳಿ ಮಾತಾಡೋಣ” ಎಂದು ಹೇಳಿ ನನ್ನ ಪ್ರತಿಕ್ರಿಯೆಯನ್ನು ಎದುರು ನೋಡುತಿದ್ದರು .

ಸಾಮಾನ್ಯವಾಗಿ ಇಂತದ್ದನ್ನೆಲ್ಲಾ ನಾನು ನಂಬುತ್ತಿರಲಿಲ್ಲ. ಎಂದೂ ಈ ಬಗೆಯ ಆಲೋಚನೆ ಕೂಡಾ ಬಂದಿರಲಿಲ್ಲ. ಆದರೂ ನನ್ನ ವೈಚಾರಿಕತೆಯನ್ನು ಮೀರಿದ ಮನಸ್ಸು, ಯಾವುದಾದರೂ ಪವಾಡದಿಂದಲಾದರು ನನಗೆ ಮಗುವಾದರೆ ಸಾಕು ಎಂದು ಬಯಸುತಿತ್ತು. ಶಾರದಮ್ಮ ನವರು ನನ್ನ ಬಗ್ಗೆ ಇಟ್ಟಿದ್ದ ಪ್ರೀತಿಯ ಅರಿವಾಗಿ, ಆಕೆ ನನ್ನ ಒಳಿತಿಗಾಗಿ ಯೋಚಿಸಿರುವುದು ನನ್ನ ಮನಸ್ಸನ್ನು ಮೃದುವಾಗಿಸಿತು. ಶಾರದಮ್ಮ ಹೇಳಿದಂತೆ ಬರೀ ಹಣ, ದಾನ್ಯ ಹೋಗುವಂತಿದ್ದರೆ ಯಾಕೆ ಪ್ರಯತ್ನಿಸಬಾರದು ಎನ್ನಿಸಿತು.

ನನ್ನ ಪ್ರತಿಕ್ರಿಯೆಯನ್ನು ಎದುರು ನೋಡುತಿದ್ದ ಶಾರದಮ್ಮನವರಿಗೆ ಒಂದು ಸಣ್ಣ ನಗುವಿನಿಂದ ನನ್ನ ಸಮ್ಮತಿ ಸೂಚಿಸಿ, ಶಾರದಮ್ಮ ನಾನು ಹೊರಗೆ ಜಗಲಿಯಮೇಲೆ ಬಂದೆವು. ಶಾರದಮ್ಮ ಬುಡುಬುಡಿಕೆಯವನಿಗೆ, “ಇವರೇ ಸೀತಮ್ಮ ಅಂತ” ಎಂದರು. ಎಲ್ಲಾ ಅರ್ಥವಾದಂತೆ, ಬುಡುಬುಡಿಕೆಯವನು ನನ್ನನ್ನು ಹತ್ತಿರ ಕರೆದು ಕುಳಿತುಕೊಳ್ಳುವಂತೆ ಹೇಳಿ ನನ್ನ ಕೈ ತೋರಿಸುವಂತೆ ಹೇಳಿದ.

ನನ್ನ ಕೈ ಧೀರ್ಘವಾಗಿ ನೋಡಿದ ನಂತರ, “ನಿಮಗೆ ಯಾರೊ ಮಾಟಾ ಮಾಡಿಸಿದ್ದಾರೆ, ಅದರಿಂದಾಗಿ ನಿಮಗೆ ಮಕ್ಕಳಾಗುತ್ತಿಲ್ಲಾ, ನಾನು ನಿಮಗಾಗಿ ಸ್ಮಶಾನದಲ್ಲಿ ಆ ಮಾಟವನ್ನು ಯಾರು ಮಾಡಿಸಿದರೋ ಅವರಿಗೇ ತಿರುಗಿಸುತ್ತೇನೆ. ನೀವು ಹೂಂ ಎಂದರೆ, ಮುಂದಿನ ಅಮಾವಾಸ್ಯಯ ದಿನ ನಿಮಗಾಗಿ ಈ ಕೆಲಸಮಾಡುತ್ತೇನೆ” ಎಂದ.

ನನಗ್ಯಾಕೊ ಆತನ ಮಾತುಗಳ ಮೇಲೆ ನಂಬಿಕೆಬರುತ್ತಿಲ್ಲಾ, ಆದರೂ, ಸರಿ ಇದಕ್ಕಾಗಿ ನಿನಗೆ ನಾವೇನು ಕೊಡಬೇಕಪ್ಪ ಎಂದೆ.
ಅದಕ್ಕೆ ಬುಡುಬುಡಿಕೆಯವನು, “ಒಂದೊಂದು ಸೇರು ನವದಾನ್ಯ, ಐದು ನೂರು ರುಪಾಯಿ” ಎಂದ.

ನನಗೆ ಸಂಪೂರ್ಣ ನಂಬಿಕೆಯೂ ಇಲ್ಲಾ, ಆದರೂ ಆತ ಕೇಳುತ್ತಿರುವುದೇನು ಹೆಚ್ಚಲ್ಲಾ, ಕೊನೆಗೂ ಹೊಯ್ದಾಡಿದ ಮನಸ್ಸು, “ಸರಿ ಇಲ್ಲೇ ಇರಪ್ಪ ನಾನು ಮನೆಗೆ ಹೋಗಿ ನೀನು ಕೇಳಿದ್ದನ್ನೇಲ್ಲಾ ತಂದು ಕೊಡ್ತೀನಿ” ಎಂದು ಹೇಳಿ ಹೊರಡಲನುವಾದೆ.

ಅದಕ್ಕೆ ಶಾರದಮ್ಮ, “ಅಯ್ಯೊ ಸೀತಾ ಇದಕ್ಯಾಕೆ ಮನೇಗೋಗ್ ಬರ್ತಿಯಾ, ಸದ್ಯಕ್ಕೆ ನಾನು ಕೊಟ್ಟಿರ್ತೀನಿ, ಆಮೇಲೆ ನೀನು ನನಗೆ ತಂದು ಕೊಡುವಿಯಂತೆ, ಒಟ್ಟಿನಲ್ಲಿ ನಿನಗೆ ಒಳ್ಳೆದಾದ್ರೆ ಅಷ್ಟೇ ಸಾಕು” ಎಂದು ಎದ್ದು ಮನೆ ಒಳಗೆ ಹೋದರು.

ಶಾರದಮ್ಮ ಬುಡುಬುಡಿಕೆಯವನಿಗೆ ಹಣ ದಾನ್ಯವನ್ನು ಕೊಡುವವರೆಗೂ ಗೋಡೆಗೊರಗಿ ಮಾತು ಕಳೆದುಕೊಂಡವಳಂತೆ ಆಕಾಶವನ್ನು ದಿಟ್ಟಿಸಿ ನೋಡುತ್ತಾ ಕಳೆದುಹೊಗಿದ್ದ ನಾನು ಎಚ್ಚರವಾಗಿ ಆ ಬುಡುಬುಡಿಕೆಯವನಿಗೆ, “ನೀನು ಮಾಟಾ ತೆಗೆಸಿದ ಮೇಲೆ ನನಗೆ ಮಕ್ಕಳು ನಿಜವಾಗಿಯೂ ಆಗತ್ತಾ” ಎಂದು ಕೇಳಬೇಕೆನಿಸಿ ನೊಡಿದರೆ, ಆತ ಅಲ್ಲಿರಲಿಲ್ಲ.