jump to navigation

ಹರಿಕತೆಯಲ್ಲಿನ ಉಪಕತೆ ಜನವರಿ 23, 2008

Posted by Bala in ಬದುಕು.
Tags: ,
1 comment so far

ಗುರುರಾಜಲು ನಾಯ್ಡು ಅವರ ಹರಿಕತೆಗಳಲ್ಲಿ ಮೂಲಕತೆಗಿನ್ನ ಅಗಾಗ್ಗೆ ಸಾಂಧರ್ಭಿಕವಾಗಿ ಹೇಳುತಿದ್ದ ಉಪಕತೆಗಳು ರೊಚಕ, ಮಾರ್ಮಿಕವಾಗಿರುತಿದ್ದವು. ಅಂತ ಒಂದು ಉಪಕತೆಗಳಲ್ಲಿ ಒಂದನ್ನು ನನಗೆ ನೆನಪಿದ್ದಷ್ಟು  ಅವರದೇ ನಾಟಕೀಯ ಶೈಲಿಯಲ್ಲಿ, ದಾಖಲಿಸುತಿದ್ದೇನೆ.

ಒಮ್ಮೆ ಇಬ್ಬರು ಅತ್ಯಂತ ಕಠಿಣ ತಪಸ್ಸಿನಲ್ಲಿ ತೊಡಗಿದ್ದರು. ತುಂಬಾ ಕಾಲದ ಬಳಿಕ ದೇವರು ಮೊದಲನೆಯವನಲ್ಲಿ ಪ್ರತ್ಯಕ್ಷನಾಗಿ,

ದೇವರು : ವತ್ಸ , ನಾನು ಬಂದಿದ್ದೇನೆ, ಕಣ್ಣನ್ನು ತೆರೆದು ನಿನಗೆ ಏನು ವರ ಬೇಕು ಕೇಳು
ಮೊದಲನೆಯವ: ಸ್ವಾಮಿ, ನನ್ನ ಕರೆಗೆ ಒಗೊಟ್ಟು  ಈ ಬಡವನಲ್ಲಿ ಬಂದದ್ದು ನನಗೆ ಅತೀವ ಸಂತೋಷವಾಗಿದೆ. ಎಂದು ಹೇಳಿ ಬಲಗಡೆ ದೂರದಲ್ಲಿ ಕುಳಿತಿದ್ದ ಇನ್ನೊಬ್ಬನೆಡೆ ತಿರುಗಿ, ಅವನ್ನಿನ್ನೂ ತಪಸ್ಸಿನಲ್ಲಿ ಕುಳಿತಿರುವುದನ್ನು ನೋಡಿ. ದೇವರನ್ನು ಮತ್ತೆ ಕೇಳಿದ. “ಸ್ವಾಮಿ, ನೀವು ಅವನಿಗೂ ವರ ಕೊಡುತ್ತೀರಾ”
ದೇವರು: ಹೌದಪ್ಪ, ನಿನ್ನಂತೆ ಅವನೂ ಕೂಡಾ ಅತ್ಯಂತ ಕಠಿಣ ತಪಸ್ಸಿನಲ್ಲಿ ತೊಡಗಿದ್ದಾನೆ, ಆದ್ದರಿಂದ ಅವನಿಗೂ ವರ ಕೊಡುತ್ತೇನೆ.
ಮೊದಲನೆಯವ:(ಸ್ವಗತ) ಏನು ಮಾಡುವುದು, ಅವನು ಏನು ಕೇಳುತ್ತಾನೆ ಎನ್ನುವುದು ಗೊತ್ತಿಲ್ಲ, ನಾನು ಏನೇ ಕೇಳಿದರೂ ನನಗಿಂತ ಹೆಚ್ಚಿಗೆ ಅವನು ಕೇಳಬಹುದು ಎಂದು ಯೋಚಿಸಿ ಕೊನೆಗೆ ದೇವರಿಗೆ ಕೇಳಿದ. “ಸ್ವಾಮಿ, ನೀವು ಅವನಿಗೆ ಏನು ಕೊಡುತ್ತೀರೊ ಅದರ ಎರಡರಷ್ಟು ನನಗೆ ಬೇಕು”
ದೇವರು : ಅಲ್ಲಯ್ಯ, ನಿನಗೆ ಏನು ಬೇಕೊ ಅದನ್ನು ಕೇಳದೆ, ಇದೆಂಥಾ ವರವಯ್ಯ ನೀನು ಕೇಳುತ್ತಿರುವುದು
ಮೊದಲನೆಯವ: ಅದೆಲ್ಲ ನನಗೆ ಗೊತ್ತಿಲ್ಲಾ ಸ್ವಾಮಿ, ನೀವು ಅವನಿಗೆ ಏನು ಕೊಡುತ್ತೀರೊ ಅದರ ಎರಡರಷ್ಟು ನನಗೆ ಬೇಕು.
ದೇವರು:(ನಗುತ್ತಾ) ತಥಾಸ್ತು

ನಂತರ ದೇವರು ಎರಡನೆಯವನ ಬಳಿ ಪ್ರತ್ಯಕ್ಷವಾಗಿ,

ದೇವರು : ವತ್ಸ , ನಾನು ಬಂದಿದ್ದೇನೆ, ಕಣ್ಣನ್ನು ತೆರೆದು ನಿನಗೆ ಏನು ವರ ಬೇಕು ಕೇಳು
ಎರಡನೆಯವ: ಓ ಅಪದ್ಭಾಂದವ, ನನ್ನ ಕರೆಗೆ ಒಗೊಟ್ಟು ಈ ಬಡವನಲ್ಲಿ ಬಂದದ್ದು ನನಗೆ ತುಂಬಾ ಸಂತೋಷವಾಗಿದೆ. ಎಂದು ಹೇಳಿ ಎಡಗಡೆ ದೂರದಲ್ಲಿ ಕುಳಿತಿದ್ದ ಇನ್ನೊಬ್ಬನೆಡೆ ತಿರುಗಿ, ಅವನಾಗಲೆ ಕಣ್ಣು ಬಿಟ್ಟು ಕುಳಿತಿರುವುದನ್ನು ನೋಡಿ. ದೇವರನ್ನು ಮತ್ತೆ ಕೇಳಿದ. “ಸ್ವಾಮಿ, ನೀವು ಅವನಿಗೆ ಆಗಲೇ ವರ ಕೊಟ್ಟಿರಾ”
ದೇವರು: ಹೌದಪ್ಪ,, ಅವನಿಗೆ ಆಗಲೇ ವರ ಕರುಣಿಸಿದ್ದೇನೆ.
ಎರಡನೆಯವ: ಸ್ವಾಮಿ ಅವನಿಗೆ ನೀವು ಏನು ವರ ಕೊಟ್ರಿ.
ದೇವರು: ಅವನು ಕೇಳಿದ್ದಾನಪ್ಪ, ನಿನಗೆ ಏನು ವರ ಕೊಡ್ತೀನೊ ಅದರ ಎರಡರಷ್ಟು ಅವನಿಗೆ ಬೇಕಂತಪ್ಪ.
ಎರಡನೆಯವ:(ಸ್ವಗತ) ಅಯ್ಯಯ್ಯೊ ಮೊಸ ಮಾಡ್ಬಿಟ್ನಲ್ಲಪ್ಪೋ, ಮೊಸ ಮಾಡ್ಬಿಟ್ಟಾ, ನಾನು ಏನು ಕೇಳಿದರೂ ಅದರ ಎರಡರಷ್ಟು ಅವನಿಗೆ ಸಿಗುತ್ತೆ ಎಂದು ಧೀರ್ಘವಾಗಿ ಆಲೋಚಿಸಿ ಕೊನೆಗೆ ದೇವರನ್ನು ಕೇಳಿದ “ಸ್ವಾಮಿ, ನನಗೆ ಒಂದು ಕೈ, ಒಂದು ಕಾಲು, ಒಂದು ಕಣ್ಣು, ಒಂದು ಕಿವಿ ಹೋಗೊವಂಥಾ ವರ ಕೊಡು”
ದೇವರು:(ನಗುತ್ತಾ) ಲೇ, ಇದ್ಯಾವ ಸೀಮೆ ವರನಯ್ಯ ನೀನು ಕೇಳ್ತಾ ಇರೋದು. ಅಲ್ಲಾ ಒಂದು ಕೈ, ಒಂದು ಕಾಲು, ಒಂದು ಕಣ್ಣು, ಒಂದು ಕಿವಿ ಹೋಗೊವಂಥಾ ವರ.
ಎರಡನೆಯವನು: ನೀನು ಕೊಡು ಸ್ವಾಮಿ, ನನಗೆ ಒಂದು ಕೈ, ಒಂದು ಕಾಲು, ಒಂದು ಕಣ್ಣು, ಒಂದು ಕಿವಿ ಹೋದರೂ ಪರ್ವಾಗಿಲ್ಲ ಅವನಿಗೆ ಎರಡು ಕೈ, ಎರಡು ಕಾಲು, ಎರಡು ಕಣ್ಣು, ಎರಡು ಕಿವಿ ಹೋಗ್ತದಲ್ಲಾ ಆಷ್ಟೇ ಸಾಕು.
ದೇವರು:(ನಗುತ್ತಾ) ತಥಾಸ್ತು.

ಮೊನ್ನೆ ಎಲ್ಲೊ ಓದುತಿದ್ದಾಗ ತಿಳಿದ ವಿಶಯ, ಯಾರೊ ದಂಪತಿಗಳ ವಿವಾಹ ವಿಚ್ಚೇದನದ ನಂತರ, ಕೋರ್ಟ್ ಪತಿಗೆ ತನ್ನ ಆಸ್ತಿಗಳನ್ನು ಮಾರಿ ಅದರ ಅರ್ಧ ಬೆಲೆಯನ್ನು ಪತ್ನಿಗೆ ಕೊಡು ಎಂದು ಆದೇಶಿಸಿತು. ಇದಕ್ಕೆ ಆ ಪತಿ ಮಹರಾಯ ಲಕ್ಷಾಂತರ ಬೆಲೆಬಾಳುವ ಆಸ್ತಿಯನ್ನು ಕಡಲೇಕಾಯಿ ಬೆಲೆಗೆ ಮಾರಿದನಂತೆ. ಯಾಕೆಂದರೆ, ನನಗೆ ದಕ್ಕದಿದ್ದರೂ ಚಿಂತೆಯಿಲ್ಲಾ ತನ್ನ ವಿಚ್ಚೇದಿತ ಪತ್ನಿಗೆ ಏನೂ ಸಿಗಬಾರದೆಂದು.