ಸಹಾಯ ಆಗಷ್ಟ್ 15, 2008
Posted by Bala in ಸಣ್ಣಕತೆ.Tags: ಕತೆ
2 comments
೧.
“ಆರಾದ್ಯ ಅವರಿಗೆ ಹುಶಾರಿಲ್ಲವಂತೆ ಸಾರ್”, ವರದಿಗಾರ ದಿವಾಕರನ ದನಿಗೆ ತಲೆಯೆತ್ತಿ ನೋಡಿದೆ, “ಪಂಡಿತ್ ಅರಾಧ್ಯ ರವರೇನ್ರಿ?” ಎಂದೆ
“ಹೌದು ಸಾರ್” ಎಂದ ದಿವಾಕರ.
“ಏನಾಗಿದೆಯಂತ್ರಿ” ಎಂದಿದ್ದಕ್ಕೆ, “ನನಗೆ ಡೀಟೈಲ್ಸ್ ಗೊತ್ತಿಲ್ಲಾಸಾರ್, ಬರೀ ವಿಶಯ ತಿಳಿತು” ಎಂದ ದಿವಾಕರ್.
ಇಡೀ ನಾಡಿನಲ್ಲೇ ಪಂಡಿತ ಅರಾದ್ಯರವರ ಸಂಗೀತ ಕೇಳದವರಿರಲಿಲ್ಲ, ಎಲ್ಲ ಪ್ರತಿಷ್ಟಿತ ಅವಾರ್ಡ್ ಗಳು ಅರಾದ್ಯ ಅವರನ್ನು ಅರಸಿಬಂದಿದ್ದವು. ಆರಾದ್ಯರವರು ನಮ್ಮ ನಾಡಿನ ಸಾಂಸ್ಕೃತಿಕ ಪ್ರತಿನಿಧಿಯಾಗಿದ್ದರು. ನನ್ನ ಅಚ್ಚುಮೆಚ್ಚಿನ ಸಂಗೀತಗಾರನಿಗೆ ಹುಶಾರಿಲ್ಲ ವೆಂದು ತಿಳಿದ ಮೇಲೆ, ನಾನು ಮಾಡುತಿದ್ದ ಕೆಲಸವನ್ನು ಅಲ್ಲೇ ನಿಲ್ಲಿಸಿ, ಸಂಪಾದಕರಿಗೆ ಸುದ್ದಿ ತಿಳಿಸಿ, ಆರಾದ್ಯ ಅವರನ್ನೊಮ್ಮೆ ಮಾತಾಡಿಸಿ ಬರುತ್ತೇನೆ ಎಂದು ಹೇಳಿ, ಬ್ಯಾಗ್ ಹೆಗಲಿಗೇರಿಸಿ, ನನ್ನ ಸ್ಕೂಟರ್ ಹತ್ತಿದೆ. ಆರಾದ್ಯ ಅವರನ್ನು ಅನೇಕ ಬಾರಿ ಭೇಟಿಯಾಗಿದ್ದೆ, ಅವರಿಗೂ ನಾನು ತುಂಬಾ ಪರಿಚಿತನಾಗಿದ್ದೆ. ಸ್ಕೂಟರನ್ನು ನೇರವಾಗಿ ಆರಾಧ್ಯ ಅವರ ಮನೆ ಕಡೆ ತಿರುಗಿಸಿದೆ. ಆವರ ಮನೆ ನಗರದ ಹೊರವಲಯದಲ್ಲಿದ್ದು, ಸೈಟು ದೊಡ್ಡದಾಗಿದ್ದರೂ, ಚಿಕ್ಕದಾಗಿ ಮನೆ ಕಟ್ಟಿಸಿಕೊಂಡಿದ್ದರು.
ಮನೆಯ ಬಾಗಿಲನ್ನು ಮೆಲ್ಲಗೆ ತಟ್ಟಿದೆ, ಸ್ವಲ್ಪ ಸಮಯದ ನಂತರ ಆರಾಧ್ಯ ಅವರ ಹೆಂಡತಿ ವಿಶಾಲಾಕ್ಷಮ್ಮನವರು ಬಾಗಿಲು ತೆರೆದರು, ಮುಖದಲ್ಲಿ ಎಂದಿನಂತಿನ ನಗುವಿರಲಿಲ್ಲ, ಕಣ್ಣನ್ನು ಸಣ್ಣದಾಗಿಸಿ ನೋಡಿ “ನೀವು ಚಿದಾನಂದ ಅಲ್ಲವೇ” ಎಂದರು, “ಹೌದು, ಆರಾದ್ಯ ಅವರಿಗೆ ಹುಶಾರಿಲ್ಲ ವೆಂದು ತಿಳಿದು ನೋಡಲು ಬಂದೆ” ಎಂದೆ, ಬನ್ನಿ ಒಳಗೆ ಎಂದು ಕರೆದರು, ನಾನು ಒಳಗೆ ಹೋಗಿ, ಚಪ್ಪಲಿಯನ್ನು ಬಿಚ್ಚಿ, ನಿಂತೆ, ಬಾಗಿಲು ಮುಚ್ಚಿದ ವಿಶಾಲಕ್ಷಮ್ಮನವರು, ಅವರು ಹಾಸಿಗೆ ಹಿಡಿದು ಹದಿನೈದು ದಿನವಾಯಿತು, ಆಸ್ಪತ್ರೆಗೆ ಸೇರಿಸಬೇಕು, ಮಂತ್ರಿಗಳಿಗೆ ವಿಶಯ ತಿಳಿಸಿದ್ದರೂ ಯಾರು ಈ ಕಡೆ ತಿರುಗಿ ನೋಡಿಲ್ಲಾ. ಹೀಗೆ ಬನ್ನಿ ಎಂದು ನನ್ನನ್ನು ಆರಾದ್ಯರವರಿದ್ದ ಕೋಣೆಗೆ ಕರೆದೊಯ್ದರು.
ನನ್ನನ್ನು ನೋಡಿ ಕೈಮುಗಿದ ಆರಾದ್ಯರವರು ಮೇಲೆ ಏಳಲು ಪ್ರಯತ್ನಿಸಿದರು, ಏಳಲಾಗಲಿಲ್ಲ, ನಾನೆ ಮುಂದೆ ಹೋಗಿ ಅವರನ್ನು ತಡೆದು, ನೀವು ಮಲಗಿರಿ, ಎಂದು ಅವರ ಹಾಸಿಗೆಯಪಕ್ಕದಲ್ಲಿದ್ದ ಸ್ಟೂಲಿನ ಮೇಲೆ ಕುಳಿತೆ.
ಬಾಡಿದ ದನಿಯಲ್ಲಿ ಆರಾದ್ಯರವರು ಮಾತಾಡಲಾರಂಭಿಸಿದರು, “ನಾಡಿಗಾಗಿ, ಸಂಸ್ಕೃತಿಗಾಗಿ, ನನ್ನ ಜೀವವನ್ನೇ ಸವೆದೆ, ನನಗೆ ಆರೋಗ್ಯವಿಲ್ಲದ ಸಮಯದಲ್ಲಿ ನನ್ನನ್ನು ನೋಡುವವರಾರು ಇಲ್ಲವಾಯಿತು, ಚಿದಾನಂದ ನಿಮ್ಮಿಂದ ಒಂದು ಸಹಾಯವಾಗಬೇಕು, ದಯವಿಟ್ಟು ಸುದ್ದಿ ಸರ್ಕಾರಕ್ಕೆ ತಿಳಿಯುವಂತೆ ಮಾಡಿ, ಸರ್ಕಾರ ನನ್ನ ಆರೋಗ್ಯದ ಬಗ್ಗೆ ಕಾಳಜಿವಹಿಸುವಂತೆ ಮಾಡುವಿರಾ” ಎಂದು ಕೇಳಿಕೊಂಡರು. ನೀವೇನೂ ಯೋಚನೇ ಮಾಡ್ಬೇಡಿ ಸಾರ್, ನಾನದಕ್ಕೆ ವ್ಯವಸ್ಥೆ ಮಾಡ್ತೀನಿ ಎಂದು ಭರವಸೆಯಿತ್ತು. ಅವರಿಂದ ಬೀಳ್ಕೊಟ್ಟು ನೇರ ಆಫೀಸಿಗೆ ಬಂದೆ. ಆರಾಧ್ಯ ಅವರ ಅನಾರೊಗ್ಯದ ಬಗ್ಗೆ ಒಂದು ಲೇಖನ ತಯಾರಿಸಿ ಸಂಪಾದಕರಿಗೆ ತೋರಿಸಿ ಅಚ್ಚಿನಮನೆಗೆ ಕಳುಹಿಸಿದೆ. ಬೆಳಿಗ್ಗೆ ದಿನವಾಣಿಯಲ್ಲಿ ದೊಡ್ಡ ಹೆಡ್ಡಿಂಗ್ನಲ್ಲಿ, “ಆರಾದ್ಯರಿಗೆ ಅನಾರೊಗ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯ” ಪ್ರಕಟವಾಯಿತು.
೨.
ಸುದ್ದಿ ಓದಿದ ಮುಖ್ಯಮಂತ್ರಿ ರಾಮರಾಯರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿ ಸಿದ್ದಪ್ಪನವರನ್ನು ಕರೆಸಿದರು. “ಅಲ್ಲಾರೀ, ಆರಾದ್ಯ ಅವರಿಗೆ ಅನಾರೊಗ್ಯ ಅಂತ ನಾವು ಪೇಪರ್ ಓದಿ ತಿಳ್ಕೋ ಬೇಕೇನ್ರಿ, ನಿಮ್ಮ ಇಲಾಖೆ ಏನ್ಮಾಡ್ತಾಇತ್ರಿ”,
“ಸಾರಿ ಸಾರ್, ನಾನು ಕಳೆದವಾರ ಪ್ರವಾಸಕ್ಕೆ ಹೋಗಿದ್ದರಿಂದ, ಈ ವಿಶಯ ನನ್ನ ಗಮನಕ್ಕೆ ಬಂದಿರಲಿಲ್ಲ ಸಾರ್”.
“ಸರಿ ನಡೀರಿ ಆರಾದ್ಯ ಅವರ ಮನೆಗೆ ಹೋಗೋಣಾ, ಹಾಗೆ, ಪ್ರೆಸ್ ನವರಿಗೂ ಬರೋಕೆ ಹೇಳ್ರಿ” ಎಂದರು ರಾಮರಾಯರು.
ಆರಾಧ್ಯ ಅವರ ಮನೆ ಮುಂದೆ ಮುಖ್ಯಮಂತ್ರಿ ರಾಮರಾಯರು, “ಆರಾದ್ಯ ಅವರ ಅರೋಗ್ಯದ ಹೊಣೆ ನಮ್ಮ ಸರ್ಕಾರದ್ದು, ಅವರ ಆಸ್ಪತ್ರೆಯ ಸಂಪೂರ್ಣ ಖರ್ಚನ್ನು ಸರ್ಕಾರ ಭರಿಸುತ್ತದೆ” ಎಂದು ಹೇಳಿಕೆ ಕೊಟ್ಟರು. ರಾಮರಾಯರೇ ಖುದ್ದು ನಿಂತು, ಆರಾಧ್ಯರನ್ನು ತಕ್ಷಣಾ ಅಸ್ಪತ್ರೆಗೆ ಸೇರಿಸಲು ಏರ್ಪಾಟು ಮಾಡಿದರು.
೩.
ಆಸ್ಪತ್ರೆಯಲ್ಲಿ, ವಿಶಾಲಾಕ್ಷಮ್ಮ ಪತಿಯ ಬಳಿ ಮೂಸಂಬಿಯ ರಸ ಹಿಂಡುತ್ತಾ, ನಾನು ಏಷ್ಟು ಹೇಳಿದರೂ ಇವರು ಕೇಳಲಿಲ್ಲ, ಮನೆ ಮಾರಿಯದರೂ ಸರಿ, ನಿಮ್ಮ ಆರೊಗ್ಯವನ್ನು ಸರಿಪಡಿಸಿಕೊಳ್ಳೊಣ ಎಂದರೆ, ನನಗೇನಾಗಿದೆಯೆ, ಎಲ್ಲಾ ಸರಿಹೋಗುತ್ತೆ ಬಿಡು, ಮನೆ ಮಾರಿದರೆ ಮುಂದೆ ಎಲ್ಲೇ ಬದುಕೋದು, ಅದೂ ಅಲ್ಲದೇ, ನನ್ನಂತಾ ವಿದ್ವಾಂಸರ ಆರೋಗ್ಯದ ಹೊಣೆ ಸರ್ಕಾರದ್ದು, ನೀನೇನು ಯೊಚನೇ ಮಾಡ್ಬೇಡಾ, ಮಂತ್ರಿಗಳ ಸಹಾಯಕನಿಗೆ ವಿಶಯ ತಿಳಿಸಿದ್ದೀನಿ, ಎಂದು ನನ್ನ ಬಾಯಿ ಮುಚ್ಚಿಸಿದರು. ವಾರವಾದರೂ ಯಾರೂ ಈ ಕಡೇ ತಿರುಗಿನೋಡಲೇ ಇಲ್ಲಾ. ಇವರ ಅರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತಾ ಹೋಯಿತು, ಚಿದಾನಂದನಿಂದ ಸಹಾಯದೊರಕದಿದ್ದರೆ ಏನಾಗುತಿತ್ತೋ, ಯಾರೊ ರೂಮಿನೊಳಗೆ ಬಂದಂತಾಗಿ ವಿಶಾಲಾಕ್ಷಮ್ಮನವರ ಯೊಚನೇ ಅಲ್ಲಿಗೇ ನಿಂತಿತು.
ಡಾಕ್ಟರ್ ಮೂರನೇಬಾರಿ, ಆರಾಧ್ಯ ಅವರನ್ನು ಚೆಕ್ ಮಾಡಲು ರೂಮಿನೊಳಗೆ ಬಂದರು, ಆರಾದ್ಯ ಅವರು ಮಲಗಿದ್ದ ರೀತಿ ನೋಡಿ ಗಾಬರಿಯಿಂದ ಅವರನ್ನು ಪರೀಕ್ಷಿಸಿದರು, ಆಷ್ಟರಲ್ಲಾಗಲೇ ಆರಾದ್ಯರವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
೪
ವಿರೋಧ ಪಕ್ಷದ ನಾಯಕ ತಮ್ಮಣ್ಣ ನವರು, ಪ್ರೆಸ್ ಕಾನ್ಫರೆನ್ಸ್ ಕರೆದು, “ಸರ್ಕಾರ ತನ್ನ ಕಾರ್ಯವನ್ನು ನಿರ್ವಹಿಸುವುದರಲ್ಲಿ ಸೋತಿದೆ, ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ಇವತ್ತು ನಾವು ಆರಾದ್ಯರಂತ ಹೆಸರಾಂತ ಸಂಗೀತಗಾರರನ್ನು ಕಳೆದುಕೊಳ್ಳುವಂತಾಗಿದೆ. ಆರಾಧ್ಯರ ಆತ್ಮಕ್ಕೆ ಶಾಂತಿಕೋರುತ್ತಾ, ನಾನು ಇವತ್ತು ಸರ್ಕಾರದ ಕಾರ್ಯವನ್ನು ವಿರೋಧಿಸುತ್ತಾ, ಒಂದು ದಿನದ ಉಪವಾಸವನ್ನು ಕೈಗೊಂಡಿದ್ದೇನೆ”, ಎಂದು ಹೇಳಿಕೆಯಿತ್ತರು.
ಎಲ್ಲಿ ಜಾರಿತೋ ನನ್ನ ಗುಂಡಿ!! ಜುಲೈ 24, 2008
Posted by Bala in ಸಣ್ಣಕತೆ.Tags: ಕತೆ
7 comments
ಬೆಳಿಗ್ಗೆ ನನಗೆ ತುಂಬಾ ಇಷ್ಟವಾದ ಶರಟನ್ನು ಇಸ್ತ್ರೀ ಮಾಡುತ್ತಿರುವಾಗ, ಶರಟಿನ ಮಧ್ಯದ ಒಂದು ಗುಂಡಿ ಸಡಿಲವಾಗಿದ್ದು ಕಾಣಿಸಿತು, ಗುಂಡಿಯನ್ನು ಸ್ವಲ್ಪ ಎಳೆದು ನೋಡಿದೆ, ನಾಲ್ಕೋ ಐದೊ ದಾರಗಳಿದ್ದು ಸ್ವಲ್ಪ ಲೂಸಾಗಿದ್ದುದು ಕಂಡುಬಂತು. ಈ ಗುಂಡಿ ಇವತ್ತು ಕಿತ್ತು ಹೋಗುತ್ತೆ ಅನ್ನಿಸಿತು. ಆದರೆ, ಆಫೀಸಿಗೆ ಹೊರಡುವ ಸಮಯವಾಗಿದ್ದು, ಮತ್ತೊಂದು ಶರಟನ್ನು ಇಸ್ತ್ರೀಮಾಡುವಷ್ಟು ಸಮಯವಿರಲಿಲ್ಲ, ಇಷ್ಟು ದಿನ ಬದುಕಿದ ಗುಂಡಿ, ಇವತ್ತೊಂದು ದಿನ ಬದುಕತ್ತೆ, ಅಲ್ಲದೇ ಇದು ಮಧ್ಯದ ಗುಂಡಿಯಾದ್ದರಿಂದ ಇದು ಇವತ್ತು ಬಧುಕುವ ಸಾಧ್ಯತೆ ಇದೇ ಎಂದುಕೊಂಡು ಶರಟನ್ನ ಮೈಯಿಗೇರಿಸಿದೆ.
ಮೆಟ್ರೋ ರೈಲಿನಲ್ಲಿ ಕೂತು, ಪುಸ್ತಕ ಓದುತಿದ್ದ ನಾನು, ಓದಿದ ಒಂದು ವಾಕ್ಯವನ್ನು ಆನಂದಿಸುತ್ತಾ ಪುಸ್ತಕದಿಂದ ತಲೆಯೆತ್ತಿದೆ, ಎದುರಿಗೆ ಒಂದು ಹುಡುಗಿ, ಆಕೆಯ ಮುಖದ ಒಂದು ಬಾಗದಲ್ಲಿದ್ದ ದಟ್ಟವಾದ ಕೂದಲನ್ನು ಎರಡೂಕೈಯಿಂದ ಹಿಡಿದು ಏನೋ ಯೋಚನೆಯಲ್ಲಿ ಮುಳುಗಿದ್ದು ಕಣ್ಣಿಗೆ ಬಿತ್ತು, ಸರಿಯಾಗಿ ಅವಳ ಕೈಬೆರಳುಗಳನ್ನು ಗಮನಿಸಿದಾಗ, ಆಕೆ ತನ್ನ ಒಂದು ಕೂದಲನ್ನ ಸೀಳುತಿದ್ದಾಳೇನೋ ಎನಿಸಿತು, ಕೂದಲ ಸೀಳುವಿಕೆಯನ್ನು ನೆನೆಸಿಕೊಂಡ ನನಗೆ ನಗು ಬಂತು.
ಆಫೀಸಿನಲ್ಲಿ ತುಂಬಾ ಕೆಲಸವಿದ್ದುದರಿಂದ ಗುಂಡಿಯ ವಿಷಯ ಮರೆತೇ ಹೋಗಿತ್ತು, ಬೆಳಿಗ್ಗೆ ಮೀಟಿಂಗೊಂದನ್ನು ಮುಗಿಸಿ ಹೊರಬರುವಾಗ, ಆಕಸ್ಮಿಕವಾಗಿ ಕಣ್ಣು ಶರಟಿನ ಗುಂಡಿಯ ಮೇಲೆ ಹೋಯಿತು, ಗುಂಡಿಯನ್ನು ನೋಡಿ ಖುಶಿಯಾಯಿತು, ಭಲೇ ಇನ್ನೂ ಜೀವವಿದೇ ಈ ಗುಂಡಿಗೆ ಎಂದುಕೊಂಡು ಮತ್ತೆ ಕೆಲಸದಲ್ಲಿ ಮುಳುಗಿಹೋದೆ.
ಮಧ್ಯಾನ ಊಟಕ್ಕೆಂದು ಹೊರಗೆ ಹೋಗುತಿದ್ದಾಗ, ನನ್ನ ಮುಂದೆ ಒಬ್ಬ ತಂದೆ ತನ್ನ ಸುಮಾರು ಐದು ವರುಷದ ಮಗನನ್ನು ಹೆಗಲಮೇಲೆ ಕೂರಿಸಿಕೊಂಡು, ತನ್ನ ಮೂರು ವರುಷದ ಮಗಳನ್ನು ಕೈಹಿಡಿದು ನಡೆಸಿಕೊಂಡು ಹೋಗುತಿದ್ದರು, ನಾನು ಅವರನ್ನು ಇನ್ನೇನು ಹಿಂದೆ ಹಾಕಿ ಮುಂದೆ ಹೋಗಬೇಕೆನ್ನುವಾಗ, ತಂದೆ ನಿಂತು ಮಗನನ್ನು ಕೆಳಗೆ ಇಳಿಸಿ ಮಗಳನ್ನು ಹೆಗಲ ಮೇಲೆ ಕೂರಿಸಿಕೊಳ್ಳುತ್ತಿರುವುದು ಕಾಣಿಸಿತು. ನನಗಿರುವ ಒಬ್ಬಳೇ ಮಗಳು ನೆನಪಿಗೆ ಬಂದು ನಗು ಬಂತು.
ಮಧ್ಯಾನ ಊಟವಾದ ಮೇಲೆ, ಕುರ್ಚಿಯಲ್ಲಿ ಕುಳಿತು ಕೆಲಸ ಮಾಡುತಿದ್ದಾಗ, ಶರಟಿನ ಮಧ್ಯದ ಭಾಗ ಮುಂದೆ ಬಂದು ಒಳಗಿನ ಬನಿಯನ್ ಕಾಣಿಸುತಿತ್ತು, ಗುಂಡಿ ಕಿತ್ತು ಹೋಗಿದೆ ಎಂಬ ಅರಿವು ಬಂದ ತಕ್ಷಣ, ನಾನು ಕುಳಿತಿದ್ದ ಕುರ್ಚಿಯ ಸುತ್ತಾಮುತ್ತಾ ನೋಡಿದೆ, ನನ್ನ ಟೇಬಲ್ ಕೆಳಗಡೆ ಬಗ್ಗಿ ನೋಡಿದೆ ಎಲ್ಲೂ ಗುಂಡಿ ಕಾಣಿಸಲಿಲ್ಲ, ನಾನು ಸಾಮಾನ್ಯ ನಡೆಯುವ ದಾರಿಗಳಲ್ಲೆಲ್ಲಾ ಹೋಗಿ ಬಂದೆ, ಎಲ್ಲೂ ಕಾಣಿಸಲಿಲ್ಲಾ. ಲಕ್ಷ್ಮೀ ನಾರಾಯಣ ಭಟ್ಟರ ಕವಿತೆ ನೆನಪಿಗೆ ಬಂತು, ಎಲ್ಲಿ ಜಾರಿತೋ ನನ್ನ ಗುಂಡಿ!! ಎಲ್ಲಿ ಅಲೆಯುತಿಹುದೋ ಎನೋ!! ಅಂತು ಬೆಳಿಗ್ಗೆ ಅನಿಸಿದಂತೆ ನನ್ನ ಪ್ರೀತಿಯ ಅಂಗಿಯ ಪ್ರೀತಿಯ ಗುಂಡಿ ಕಣ್ಮರೆಯಾಗಿತ್ತು,
ಪೂರ್ಣವ ಕೊಡದೆ ಪೂರ್ಣವ ಪಡೆವುದೆಂತು? ಡಿಸೆಂಬರ್ 30, 2007
Posted by Bala in ಸಣ್ಣಕತೆ.Tags: ಸಣ್ಣಕತೆ
1 comment so far
ನಾನು ಈ ಇಳಿವಯಸ್ಸಿನಲ್ಲಿ ಮನೆಯಲ್ಲಿ ಕಾಲ ಕಳೆಯುವುದಕ್ಕಿನ್ನ ಮನೆಯ ಪಕ್ಕದಲ್ಲಿದ್ದ ಪಾರ್ಕಿನಲ್ಲಿ ಹೆಚ್ಚು ಕಾಲ ಕಳೆಯುತಿದ್ದೇನೆ ಅನಿಸುತಿದ್ದೆ, ಹಾಗೆ ನೋಡಿದರೆ ತೀರಾ ಇತ್ತೀಚಿನವರೆಗೂ ನನ್ನ ಜೀವಮಾನವೆಲ್ಲ ಮನೆಯ ಹೊರಗೇ ಕಳೆದಿದ್ದೇನೆ. ಮಕ್ಕಳು ಪ್ರಿಂಟಿಗ್ ಪ್ರೆಸ್ ನೊಡಿಕೊಳ್ಳಲು ಶುರು ಮಾಡಿದ ಮೇಲೆ, ಮೈಯಲ್ಲಿ ಎಂದಿನಂತೆ ಆರೊಗ್ಯವಿಲ್ಲದೆ ಮೂರು ಹೊತ್ತು ಮನೆಯಲ್ಲಿರಬೆಕಾಗಿದೆ. ಆದರೆ ಉಸಿರುಗಟ್ಟುವ ಮನೆಯ ವಾತಾವರಣ, ಅಥವಾ ಎಂದೂ ಮನೆಯಲ್ಲಿ ಇರದ ಕಾರಣವೊ ಎನೊ, ನಾನು ಹೆಚ್ಚು ಹೊತ್ತು ಪಾರ್ಕಿನಲ್ಲಿ ಕಳೆಯುವಂತಾಗಿದೆ. ಮನೆಯಲ್ಲಿ ಹೆಂಡತಿ ಮಕ್ಕಳಿಗೆ, ನನ್ನ ಬಗ್ಗೆ ಅಸಡ್ಡೆ, ಹಾಗೆಂದು ನನ್ನ ಬೇಕು ಬೇಡಗಳಾವುದನ್ನೂ ನನ್ನ ಮನೆಯವರು ನಿರಾಕರಿಸಿಲ್ಲ, ಆದರೆ ನನ್ನೊಡನೆ ಯಾರಿಗೂ ಆತ್ಮೀಯತೆಯಿಲ್ಲ. ಪದ್ಮ ನನ್ನೊಡನೆ ಮಾತಾಡುವುದನ್ನು ನಿಲ್ಲಿಸಿ ವರ್ಷಗಟ್ಟಲೆ ಯಾಗಿದೆ. ವಿಜಯ ವಿಕ್ರಮರು ನನ್ನೊಡನೆ ವ್ಯವಹಾರಕ್ಕೆ ಎಷ್ಟು ಬೇಕೊ ಆಷ್ಟು ಮಾತು. ಈ ಇಳಿವಯಸ್ಸಿನಲ್ಲಿ ಎಲ್ಲಾ ಇದ್ದೂ ಎನೂ ಇಲ್ಲದವನಂತಿದ್ದೇನೆ.
ಬೆಳಿಗ್ಗೆ ಮನೆಯಿಂದ ಹೊರಟು ಪಾರ್ಕಿನ ಕಡೆ ನಡೆಯುತಿದ್ದಾಗ, ಏನು ಶ್ಯಾಮಣ್ಣೋರು ಗಾಳಿಸೇವನೆಗೆ ಹೊರಟಹಾಗಿದೆ, ಪರಿಚಯದವರು ದಾರಿಯಲ್ಲಿ ಕೇಳಿದರು, ಎದುರುತ್ತರವಾಗಿ, ಸಣ್ಣಗೆ ನಕ್ಕು ಮುಂದುವರೆದೆ. ಸುಬ್ಬು, ನನ್ನ ಬಾಲ್ಯ ಸ್ನೇಹಿತ ದಾರಿಯಲ್ಲಿ ನನ್ನನ್ನು ಕೂಡಿಕೊಂಡ, ಪಾರ್ಕಿನ ಕಡೆ ಹೆಜ್ಜೆ ಹಾಕುತಿದ್ದೆವು. “ಸುಬ್ಬು, ನಾನು ಈಗಿರುವ ಸ್ಥಿತಿಗೆ ನಾನೆ ಕಾರಣ, ಏನಂತೀಯಾ”, ಈ ಪ್ರಶ್ನೆಯನ್ನು ಹಲವಾರು ಬಾರಿ ಕೇಳಿದ್ದೆ, ನನ್ನನು ಚೆನ್ನಾಗಿ ಬಲ್ಲ ಸುಬ್ಬು ಎಂದಿನಂತೆ ಮೌನವಾಗಿ ನಡೆಯತೊಡಗಿದ. ನನ್ನಲ್ಲಿದ್ದ ಅಳುಕು ನನ್ನನ್ನು ಕಾಡತೊಡಗಿತು. ನಾನು ಸುಬ್ಬು ಮೌನವಾಗಿಯೆ, ಪಾರ್ಕಿನಲ್ಲಿ ಎರಡು ಸುತ್ತು ನಡೆದು, ಸ್ವಲ್ಪ ಹೊತ್ತು ಬೆಂಚಿನ ಮೇಲೆ ಕುಳಿತಿದ್ದೆವು. ಸುಬ್ಬು ಮೌನವಾಗಿದ್ದರೂ, ಅವನ ಮನಸ್ಸು ಹೇಳುತಿದ್ದುದು ನನಗೆ ಕೇಳಿಸುತ್ತಿದೆ. ಸುಬ್ಬು ನಾನು ವಾರಕ್ಕೊಮ್ಮೆಯದರೂ ಬಾರಿನಲ್ಲಿ ಕುಳಿತು ಹರಟೇ ಹೊಡೆಯುತಿದ್ದು ಬಾಲ್ಯದಿಂದಲೂ ನಡೆದು ಬಂದಿದ್ದು. ನನ್ನ ಸ್ವಭಾವ ವನ್ನು ಚೆನ್ನಾಗಿ ಅರಿತಿದ್ದ ಸುಬ್ಬು ಯಾವಗಲೂ ಹೇಳುತ್ತಿದ್ದ, ಮನೆಯಕಡೆ ಗಮನಕೊಡೊ, ಪದ್ಮಳಿಗೆ ತಕ್ಕ ಗಂಡನಾಗು, ನಿನ್ನ ಮಕ್ಕಳಿಗೆ ತಂದೆಯತನವನ್ನು ತೋರಿಸಿಕೊಡೊ. ನನಗೆ ಅವನು ಹೇಳುತ್ತಿದ್ದುದರ ಅರ್ಥ, ಆಗ ಆಗಿರಲಿಲ್ಲ, ಈಗ ಅನುಭವಿಸುತಿದ್ದೇನೆ. ಸ್ವಲ್ಪ ಹೊತ್ತಿನ ನಂತರ ಇಬ್ಬರೂ ಮನೆಯಕಡೆ ನಡೆದೆವು, ಮಾರ್ಗದಲ್ಲಿ, ಸುಬ್ಬು ಎಂದಿನಂತೆ ತನ್ನ ಮನೆಯ ಕಡೆ ತಿರುಗಿದ. ನಾನು ಮನೆಗೆ ಬಂದೆ, ಪದ್ಮ ಆಡುಗೆ ಮನೆಯಲ್ಲಿ ಆಡುಗೇ ಮಾಡುತಿದ್ದದ್ದು ಕಾಣಿಸಿತು. ನನ್ನ ರೂಮಿಗೆ ಬಂದು, ಶರಟನ್ನು ಬಿಚ್ಚಾಕಿ, ದೊಡ್ಡ ಆಕಳಿಕೆ ಬಂದು ಮಂಪರು ಕವಿದಂತಾಗಿ ಹಾಗೆ ಮಂಚದ ಮೇಲೆ ಒರಗಿಕೊಂಡೆ.
ನಾನು ಒಬ್ಬನೇ ಮಗನಾದದ್ದರಿಂದ, ಯಾವುದಕ್ಕೂ ಕೊರತೆಯಿಲ್ಲದೆ ಬಹಳ ಮುದ್ದಿನಿಂದ ಸಾಕಿದ್ದರು. ಕಾಲೇಜಿಗೆ ಸೇರಿದಾಗ, ಅಮ್ಮ ನಾನು ಕೇಳಿದ ಬೈಕ್ ಕೊಡಿಸಿದ್ದರು. ಯಾರವಳು ನನ್ನ ಮೊದಲನೇ ಗೆಳತಿ, ನಳಿನಿಯಿರಬೇಕು, ನನ್ನನ್ನ ಮೇಲೆ ಬಿದ್ದು ಮಾತಾಡಿಸಿಕೊಂಡು ಬರುತಿದ್ದಳು, ಒಮ್ಮೆ ಮೂವಿ ನೊಡಲು ಬರ್ತೀಯಾ, ಎಂದು ಕೇಳಿದಾಗ, ಹಿಂದು ಮುಂದು ನೋಡದೆ ಬೈಕ್ ಏರಿ ಕುಳಿತಳು. ಅಲ್ಲಿಂದ ಶುರುವಾದದ್ದು, ನನ್ನ ದಿನಚರಿಯಲ್ಲಿ ಗೆಳತಿಯರ ಸಂಖ್ಯೆ ಬೆಳೆಯುತ್ತ ಹೋಯಿತು, ಯಾರಿಗೂ ಅಂಟಿಕೊಳ್ಳದೆ ಒಂದು ಹೂವಿನಿಂದ ಮತ್ತೊಂದು ಹೂವಿಗೆ ಹಾರುವು ದುಂಬಿಯಂತೆ ಬೆಳೆಯತೊಡಗಿದೆ. ನಾನು ಅರಿತುಕೊಳ್ಳುವ ಮೊದಲೇ ಈ ಹುಚ್ಚು ನನ್ನನಾವರಿಸಿತ್ತು. ಕಾಲೇಜು ಮುಗಿದು, ಅಪ್ಪನ ಪ್ರಿಂಟಿಂಗ್ ಪ್ರೆಸ್ ನೋಡಿಕೊಳ್ಳಲಾರಂಬಿಸಿದರೂ, ನನ್ನ ಹುಚ್ಚು ಬೆಳೆಯುತ್ತಲೇ ಹೋಯಿತು.
ಈ ಮಧ್ಯ ಅಪ್ಪ ಅಮ್ಮ, ಮದುವೆಯಾಗು ಎಂದು ನನ್ನನು ಪೀಡಿಸಲಾರಂಭಿಸಿದರು. ನನಗೆ ಮದುವೆ ಬೇಕಿಲ್ಲದಿದ್ದರೂ, ಬೇಡ ಎನ್ನುವದಕ್ಕೂ ಯಾವ ಕಾರಣವಿಲ್ಲದ್ದರಿಂದ, ಮದುವೆಯಾಗಲು ಒಪ್ಪಿದ್ದೆ. ನೋಡಲು ಸುಂದರವಾಗಿದ್ದ ಪದ್ಮಳನ್ನು ನನಗೆ ತೋರಿಸಿದರು, ನಾನು ಒಪ್ಪಿದೆ. ಪದ್ಮಳೊಡನೆ ನನ್ನ ಮದುವೆಯಾಯಿತು. ಪದ್ಮಳೊಡನೆ ನಾನು ಯಾವತ್ತೂ ಅತ್ಮೀಯತೆಯಿಂದ ಒಬ್ಬ ಸಾಮಾನ್ಯ ಗಂಡನಂತೆ ನಡೆದುಕೊಳ್ಳಲೇ ಇಲ್ಲ. ಇವಳು ಒಂದು ಹೂವು ಮಾತ್ರವಾಗಿದ್ದಳು. ಪದ್ಮ ಮೊದಮೊದಲು ನನ್ನಿಂದ ಬದಲಾವಣೆಯನ್ನು ಬಯಸಿ, ನನ್ನೊಡನೆ ಜಗಳವಾಡುತಿದ್ದಳು. ನನ್ನನ್ನು ಹೊರಗಡೆ ಕರೆದುಕೊಂಡು ಹೋಗಿ, ನಿಮ್ಮ ಮನಸ್ಸಿನಲ್ಲಿರುವುದನ್ನೆಲ್ಲಾ ಹೇಳಿ ಎಂದು ಪ್ರಾಣ ಹಿಂಡುತಿದ್ದಳು. ನಾನೊ ಕಲ್ಲಿನಂತಿದ್ದೆ, ನನಗೆ ಬರಿ ಪಡೆದುಕೊಳ್ಳುವುದು ಮಾತ್ರ ಗೊತ್ತಿತ್ತು, ಕೊಡುವುದನ್ನು ಎಂದೂ ಕಲಿಯಲೇ ಇಲ್ಲ. ಕ್ರಮೇಣ ನನ್ನ ಎಲ್ಲ ಬಣ್ಣಗಳನ್ನು ಅರಿತ ಅವಳು, ಮೌನದ ಮೊರೆಹೋಗಿಬಿಟ್ಟಳು. ಈ ಮಧ್ಯ ವಿಜಯ, ವಿಕ್ರಮರು ಹುಟ್ಟಿದ್ದು, ಬೆಳೆದಿದ್ದು ನನ್ನ ಗಮನಕ್ಕೆ ಅಷ್ಟಾಗಿ ಬರಲೇ ಇಲ್ಲಾ. ನಾನು ಅವರಿಗೆ ತಂದೆಯಾಗಿದ್ದರೆ ತಾನೆ ಅದೆಲ್ಲಾ ತಿಳಿಯುತಿದ್ದುದು, ಅವರು ಏನು ಒದುತಿದ್ದಾರೆಂದು ಕೂಡ ತಿಳಿದುಕೊಳ್ಳಲು ಪ್ರಯತ್ನಿಸಿರಲಿಲ್ಲ. ಮೂರುಹೊತ್ತು, ಪ್ರಿಂಟಿಂಗ್ ಪ್ರೆಸ್ ಮತ್ತು ನನ್ನ ಗೆಳತಿಯರು, ನೀರಿನಂತೆ ಹಣ ಕರ್ಚಾಗುತಿತ್ತು, ಕೂತು ತಿನ್ನುವಷ್ಟು ಹಣವಿದ್ದುದರಿಂದ, ನನಗೆ ಕೊರತೆ ಕಾಣಿಸಲಿಲ್ಲ. ಕ್ರಮೇಣ ವಯಸ್ಸಾದಂತೆ, ಎಂದೂ ಯಾರಿಗು ಆಂಟಿಕೊಳ್ಳದ ನನಗೆ, ಈಗ ಸಂಬಂದಗಳು ಬೇಕೆನಿಸುತ್ತಿದೆ, ಗಂಡನಾಗಬೇಕು, ತಂದೆಯಾಗಬೇಕೆನಿಸುತ್ತಿದೆ. ಈಗ ನನಗೆ ಅತ್ಮೀಯತೆಯ ಅಗತ್ಯ ಕಾಣಿಸುತ್ತಿದೆ, ನಾನು ಬದುಕಿರಲು, ನನ್ನ ಉಸಿರಿನೊಡನೆ ನನ್ನನ್ನು ಆತ್ಮೀಯವಾಗಿ ನೊಡುವು ಕಣ್ಣುಗಳು, ಮಾತಾಡುವ ಬಾಯಿಗಳು, ಕೇಳುವ ಕಿವಿಗಳು ಬೇಕೆನಿಸುತ್ತಿದೆ. ಆದರೆ ಈ ಬೇಕುಗಳು ಈಗ ನನಗೆ ಸಿಗದಷ್ಟು ದೂರ ಹೋಗಿಬಿಟ್ಟಿದ್ದೀನಿ ಎಂಬ ಅರಿವು ಬಂದು ಕಣ್ಣಿನಲ್ಲಿ ನೀರು ತುಂಬಿಕೊಂಡಿತು.
ನಿರೀಕ್ಷೆ – ಒಂದು ಸಣ್ಣ ಕತೆ ಡಿಸೆಂಬರ್ 8, 2007
Posted by Bala in ಸಣ್ಣಕತೆ.Tags: ಸಣ್ಣಕತೆ
5 comments
ನಾನು ನರಹರಿ ಮದುವೆಯಾಗಿ ಎಂಟು ವರುಷಗಳಾಯಿತು. ನರಹರಿ ನನಗೆ ಹೇಳಿ ಮಾಡಿಸಿದಂಥಾ ಗಂಡ, ನಮ್ಮಿಬ್ಬರದೂ ಅನ್ಯೋನ್ಯವಾದ ಸಂಬಂಧ, ನನಗಿದ್ದ ಒಂದೆ ಕೊರತೆಯೆಂದರೆ, ನಮಗೆ ಮಕ್ಕಳಿಲ್ಲ ಎಂಬುದು. ವೈದ್ಯರಿಗೆ ತೋರಿಸಿದ್ದಾಯಿತು, ದೋಷವಿರೊದು ನನ್ನಲ್ಲೆ ಎಂದು ಗೊತ್ತಾದ ದಿನದಿಂದ ಎನೋ ಒಂದು ರೀತಿ ಅಳುಕು, ದೋಷ ನನಲ್ಲಿದ್ದು ನನ್ನಿಂದ ನರಹರಿ ಕೂಡಾ ಮಕ್ಕಳಿಲ್ಲದ ಕೊರಗು ಕೊಡುತಿದ್ದೇನಲ್ಲಾ ಎಂಬ ದುಃಖ. ಕೊನೆಗೊಮ್ಮೆ ನರಹರಿಗೆ ಇನ್ನೊಂದು ಮದುವೆಯಾಗಲು ಸೂಚಿಸಿದಾಗ, “ನಿನಗೇನಾದರೂ ಬುದ್ದಿಗಿದ್ದಿಯಿದೆಯಾ? ಮಕ್ಕಳಾಗದಿದ್ದರೇನು, ನಾವಿಬ್ಬರು ಅನ್ಯೋನ್ಯವಾಗಿ ಕೊನೆವರಗೂ ನನಗೆ ನೀನು ನಿನಗೆ ನಾನು, ಜೀವನದಲ್ಲಿ ಇದಕ್ಕಿಂತ ಹೆಚ್ಚೀನನ್ನು ಬಯಸಿದವನಲ್ಲ, ಇನ್ನೆಂದೂ ಈ ರೀತಿ ಮಾತಾಡಬೇಡಾ” ಎಂದು ನನಗೆ ಚೆನ್ನಾಗಿ ಬೈದು ಹೇಳಿದ. ನರಹರಿಯ ಮಾತು ಕೇಳಿದಾಗ ಹೌದು ನಮಗಿನ್ನೇನು ಬೇಕು, ಯಾವುದಕ್ಕೂ ಕೊರತೆಯಿರಲಿಲ್ಲ, ಅದರೂ ನಮ್ಮಲ್ಲಿ ಎನಿಲ್ಲವೊ ಅದರ ಸೆಳೆತ ಹೆಚ್ಚಾಗಿ ಕೆಲವೊಮ್ಮೆ ನರಹರಿಯ ಮನಸ್ಸು ನೊಯಿಸಿದ್ದು ಇದೇ, ಅದಾದ ಮೇಲೆ ಕ್ಷಮೇ ಕೇಳಿ ಅತ್ತಿದ್ದೂ ಉಂಟು. ಪ್ರಪಂಚದಲ್ಲಿ ಎಷ್ಟೋ ವೈಚಿತ್ರಗಳು ನಡೆಯುತ್ತವಂತೆ, ಈ ವೈದ್ಯರ ಮಾತು ಸುಳ್ಳಾಗಿ ನನಗೆ ಮಗುವಾದರೆ.. ಆಲೋಚನೆಯಲ್ಲಿ ಮುಳುಗಿದ್ದಾಗ, ಯಾರೊ ಬಾಗಿಲು ಬಡಿದಂತಾಯ್ತು.
ಮಂಚದ ಮೇಲೆ ಮಲಗಿ ಯೋಚಿಸುತಿದ್ದ ನಾನು, ಎದ್ದು ಬಾಗಿಲು ತೆಗೆದರೆ ಶಾರದಮ್ಮನ ಮಗ ನಾಗು ಏದುಸಿರು ಬಿಡುತ್ತಾ ನಿಂತಿದ್ದ ಅವನನ್ನು ಕಂಡು, “ಏನಪ್ಪ” ಎಂದೆ. ಏದುಸಿರಿನಲ್ಲೆ, “ನಮ್ಮಮ್ಮ ನಿಮ್ಮನ್ನ ಈಗ್ಲೇ ಕರ್ಕೊಂಡ್ಬಾ ಅಂದ್ರು” ಎಂದ.
“ಯಾಕೊ” ಎಂದೆ.
ಅದಕ್ಕೆ “ನಂಗೊತ್ತಿಲ್ಲಾ” ಎಂದ.
ನನಗೆ ಮಾಡಲು ಏನೂ ಕೆಲಸವಿಲ್ಲದ್ದಿರಿಂದ, “ಬರ್ತೀನಿ ಅಂತ ಅಮ್ಮನಿಗೆ ಹೇಳು” ಎಂದೆ.
ತಕ್ಷಣ, ಮೆಟ್ಟಿಲಿಳಿದು ಓಡಿದ, ಅವನು ರಸ್ತೆ ತಿರುಗಿ ಮರೆಯಾಗುವವರೆಗೂ ಬಾಗಿಲಲ್ಲೆ ನೋಡುತ್ತಾ ನಿಂತೆ. ಅವನು ಓಡುವಾಗ ಸ್ಕೂಟರ ಒಡಿಸುವವನಂತೆ ಕೈ ಹಿಡಿದು ಪುರ್ ಎಂದು ಶಬ್ದ ಮಾಡುತ್ತಾ ಒಡುವುದನ್ನು ನೋಡಿ ನಗು ಬಂತು. ನಾಗು ಎಂಟು ವರ್ಷದ ಹುಡುಗ, ತೆಳು ಮೈಕಟ್ಟು, ಆಕರ್ಶಕ ಮುಖ, ಅವನನ್ನು ನೋಡಿದಾಗಲೆಲ್ಲಾ, ನನಗೂ ಇಂಥಾ ಒಬ್ಬ ಮಗನಿರಬಾರದಿತ್ತೇ ಎನಿಸುತಿತ್ತು.
ಬೆಂಗಳೂರಿಗೆ ಬಂದು ಎರಡು ವರುಷವಾಯಿತು, ಬಾಡಿಗೆ ಮನೆಯಲ್ಲಿ ನಾನೂ ನರಹರಿ ವಾಸ ಮಾಡುತಿದ್ದೆವು. ಬಂದ ಹೊಸತರಲ್ಲಿ ಯಾರೂ ಪರಿಚಯವಿರಲ್ಲ್ಲ. ನಾನು ತರಕಾರಿಗೆ ಹೋಗುವಾಗ, ಶಾರದಮ್ಮನ ಪರಿಚಯವಾಯಿತು. ಸ್ವಲ್ಪ ವಾಚಾಳಿಯಾದರೂ ಶಾರದಮ್ಮ ನನಗೆ ಬಲು ಹಿಡಿಸಿದರು. ಶಾರದಮ್ಮನ ಜೊತೆ ಮಾತಿಗೆ ಕುಳಿತರೆ ಹೊತ್ತು ಕಳೆಯುವುದೇ ತಿಳಿಯುತ್ತಿರಲಿಲ್ಲ. ನರಹರಿ ಕೆಲಸಕ್ಕೆ ಹೊದಮೇಲೆ, ಹೊತ್ತು ಕಳೆಯಲು ಶಾರದಮ್ಮನ ಮನೆಯ ಜಗುಲಿಮೇಲೆ ಕುಳಿತು ಹರಟೇ ಹೊಡೆ ಯುವುದು ನನ್ನ ನಿತ್ಯ ದಿನಚರಿಯಾಗಿತ್ತು. ನಾನು ಹೆಚ್ಚು ಮಾತಾಡುತ್ತಿರಲಿಲ್ಲ, ಅಲ್ಲಿ ಇರುತಿದ್ದ ಶಾರದಮ್ಮ ಹಾಗೂ ಇತರರು ಮಾತಾಡುವುದನ್ನು ಕೇಳುತ್ತಾ ಕುಳಿತಿರುತಿದ್ದೆ. ನಾನು ಏನೇ ಕೊಳ್ಳ ಬೇಕೆಂದಿದ್ದರೂ ಶಾರದಮ್ಮನನ್ನೂ ಕರೆದೊಯ್ಯುತಿದ್ದೆ, ಚೌಕಾಸಿ ಮಾಡುವುದರಲ್ಲಿ ಶಾರದಮ್ಮ ಎತ್ತಿದ ಕೈ. ಆತ್ಮೀಯರಾದ ಶಾರದಮ್ಮನ ಬಳಿ ನಾನು ಏನನ್ನೂ ಮುಚ್ಚಿಟ್ಟಿರಲಿಲ್ಲ. ಇಂದು ಯಾಕೆ ಹೇಳಿಕಳಿಸಿದರೋ ತಿಳಿಯಲ್ಲಿಲ್ಲ, ಹೋಗಿ ಬರೋಣವೆಂದು ಸೀರೆ ಸರಿಮಾಡಿಕೊಂಡು, ತಲೆ ಬಾಚಿಕೊಂಡು ಮನೆಗೆ ಬೀಗ ಹಾಕಿ ಶಾರದಮ್ಮನ ಮನೆಯ ಕಡೆ ಹೆಜ್ಜೆ ಹಾಕಿದೆ.
ಶಾರದಮ್ಮನ ಮನೆಯ ಜಗಲಿಯ ಮೇಲೆ ಗಡ್ಡಾಧಾರಿಯಾದ ಒಬ್ಬ ಬುಡುಬುಡಿಕೆಯವನು ಶಾರದಮ್ಮನ ಜೊತೆ ಮಾತಾಡುತ್ತಿರುವುದು ಕಂಡುಬಂತು. ಹತ್ತಿರ ಬಂದಾಗ, ಶಾರದಮ್ಮ ಕಣ್ಸನ್ನೆ ಮಾಡಿ ನನ್ನನ್ನು ಮನೆಯ ಒಳಗೆ ಕರೆದೊಯ್ದು, “ಈ ಬುಡುಬುಡಿಕೆಯವನು ಮಕ್ಕಳಿಲ್ಲದವರಿಗೆ ಮಕ್ಕಳಾಗುವಂತೆ ಮಾಟಮಾಡಿಸ್ತಾನಂತೆ, ಅವನು ಹೇಳಿದ್ದೆಲ್ಲಾ ಕೇಳಿದರೆ ನಂಬುವಂತಿದೆ, ನಿಮ್ಮ ಕಷ್ಟ ನೋಡಿ ನೋಡಿ, ನೀವು ಯಾಕೆ ಈತ ಹೇಳಿದಂತೆ ಮಾಡಬಾರದು, ಕಳೆದು ಕೊಳ್ಳುವುದೇನಿಲ್ಲಾ, ಕೊಂಚ ಹಣ, ದಾನ್ಯ, ಯೋಚಿಸಿ, ನೀವು ಹೂಂ ಅಂದರೆ ಅವನ ಬಳಿ ಮಾತಾಡೋಣ” ಎಂದು ಹೇಳಿ ನನ್ನ ಪ್ರತಿಕ್ರಿಯೆಯನ್ನು ಎದುರು ನೋಡುತಿದ್ದರು .
ಸಾಮಾನ್ಯವಾಗಿ ಇಂತದ್ದನ್ನೆಲ್ಲಾ ನಾನು ನಂಬುತ್ತಿರಲಿಲ್ಲ. ಎಂದೂ ಈ ಬಗೆಯ ಆಲೋಚನೆ ಕೂಡಾ ಬಂದಿರಲಿಲ್ಲ. ಆದರೂ ನನ್ನ ವೈಚಾರಿಕತೆಯನ್ನು ಮೀರಿದ ಮನಸ್ಸು, ಯಾವುದಾದರೂ ಪವಾಡದಿಂದಲಾದರು ನನಗೆ ಮಗುವಾದರೆ ಸಾಕು ಎಂದು ಬಯಸುತಿತ್ತು. ಶಾರದಮ್ಮ ನವರು ನನ್ನ ಬಗ್ಗೆ ಇಟ್ಟಿದ್ದ ಪ್ರೀತಿಯ ಅರಿವಾಗಿ, ಆಕೆ ನನ್ನ ಒಳಿತಿಗಾಗಿ ಯೋಚಿಸಿರುವುದು ನನ್ನ ಮನಸ್ಸನ್ನು ಮೃದುವಾಗಿಸಿತು. ಶಾರದಮ್ಮ ಹೇಳಿದಂತೆ ಬರೀ ಹಣ, ದಾನ್ಯ ಹೋಗುವಂತಿದ್ದರೆ ಯಾಕೆ ಪ್ರಯತ್ನಿಸಬಾರದು ಎನ್ನಿಸಿತು.
ನನ್ನ ಪ್ರತಿಕ್ರಿಯೆಯನ್ನು ಎದುರು ನೋಡುತಿದ್ದ ಶಾರದಮ್ಮನವರಿಗೆ ಒಂದು ಸಣ್ಣ ನಗುವಿನಿಂದ ನನ್ನ ಸಮ್ಮತಿ ಸೂಚಿಸಿ, ಶಾರದಮ್ಮ ನಾನು ಹೊರಗೆ ಜಗಲಿಯಮೇಲೆ ಬಂದೆವು. ಶಾರದಮ್ಮ ಬುಡುಬುಡಿಕೆಯವನಿಗೆ, “ಇವರೇ ಸೀತಮ್ಮ ಅಂತ” ಎಂದರು. ಎಲ್ಲಾ ಅರ್ಥವಾದಂತೆ, ಬುಡುಬುಡಿಕೆಯವನು ನನ್ನನ್ನು ಹತ್ತಿರ ಕರೆದು ಕುಳಿತುಕೊಳ್ಳುವಂತೆ ಹೇಳಿ ನನ್ನ ಕೈ ತೋರಿಸುವಂತೆ ಹೇಳಿದ.
ನನ್ನ ಕೈ ಧೀರ್ಘವಾಗಿ ನೋಡಿದ ನಂತರ, “ನಿಮಗೆ ಯಾರೊ ಮಾಟಾ ಮಾಡಿಸಿದ್ದಾರೆ, ಅದರಿಂದಾಗಿ ನಿಮಗೆ ಮಕ್ಕಳಾಗುತ್ತಿಲ್ಲಾ, ನಾನು ನಿಮಗಾಗಿ ಸ್ಮಶಾನದಲ್ಲಿ ಆ ಮಾಟವನ್ನು ಯಾರು ಮಾಡಿಸಿದರೋ ಅವರಿಗೇ ತಿರುಗಿಸುತ್ತೇನೆ. ನೀವು ಹೂಂ ಎಂದರೆ, ಮುಂದಿನ ಅಮಾವಾಸ್ಯಯ ದಿನ ನಿಮಗಾಗಿ ಈ ಕೆಲಸಮಾಡುತ್ತೇನೆ” ಎಂದ.
ನನಗ್ಯಾಕೊ ಆತನ ಮಾತುಗಳ ಮೇಲೆ ನಂಬಿಕೆಬರುತ್ತಿಲ್ಲಾ, ಆದರೂ, ಸರಿ ಇದಕ್ಕಾಗಿ ನಿನಗೆ ನಾವೇನು ಕೊಡಬೇಕಪ್ಪ ಎಂದೆ.
ಅದಕ್ಕೆ ಬುಡುಬುಡಿಕೆಯವನು, “ಒಂದೊಂದು ಸೇರು ನವದಾನ್ಯ, ಐದು ನೂರು ರುಪಾಯಿ” ಎಂದ.
ನನಗೆ ಸಂಪೂರ್ಣ ನಂಬಿಕೆಯೂ ಇಲ್ಲಾ, ಆದರೂ ಆತ ಕೇಳುತ್ತಿರುವುದೇನು ಹೆಚ್ಚಲ್ಲಾ, ಕೊನೆಗೂ ಹೊಯ್ದಾಡಿದ ಮನಸ್ಸು, “ಸರಿ ಇಲ್ಲೇ ಇರಪ್ಪ ನಾನು ಮನೆಗೆ ಹೋಗಿ ನೀನು ಕೇಳಿದ್ದನ್ನೇಲ್ಲಾ ತಂದು ಕೊಡ್ತೀನಿ” ಎಂದು ಹೇಳಿ ಹೊರಡಲನುವಾದೆ.
ಅದಕ್ಕೆ ಶಾರದಮ್ಮ, “ಅಯ್ಯೊ ಸೀತಾ ಇದಕ್ಯಾಕೆ ಮನೇಗೋಗ್ ಬರ್ತಿಯಾ, ಸದ್ಯಕ್ಕೆ ನಾನು ಕೊಟ್ಟಿರ್ತೀನಿ, ಆಮೇಲೆ ನೀನು ನನಗೆ ತಂದು ಕೊಡುವಿಯಂತೆ, ಒಟ್ಟಿನಲ್ಲಿ ನಿನಗೆ ಒಳ್ಳೆದಾದ್ರೆ ಅಷ್ಟೇ ಸಾಕು” ಎಂದು ಎದ್ದು ಮನೆ ಒಳಗೆ ಹೋದರು.
ಶಾರದಮ್ಮ ಬುಡುಬುಡಿಕೆಯವನಿಗೆ ಹಣ ದಾನ್ಯವನ್ನು ಕೊಡುವವರೆಗೂ ಗೋಡೆಗೊರಗಿ ಮಾತು ಕಳೆದುಕೊಂಡವಳಂತೆ ಆಕಾಶವನ್ನು ದಿಟ್ಟಿಸಿ ನೋಡುತ್ತಾ ಕಳೆದುಹೊಗಿದ್ದ ನಾನು ಎಚ್ಚರವಾಗಿ ಆ ಬುಡುಬುಡಿಕೆಯವನಿಗೆ, “ನೀನು ಮಾಟಾ ತೆಗೆಸಿದ ಮೇಲೆ ನನಗೆ ಮಕ್ಕಳು ನಿಜವಾಗಿಯೂ ಆಗತ್ತಾ” ಎಂದು ಕೇಳಬೇಕೆನಿಸಿ ನೊಡಿದರೆ, ಆತ ಅಲ್ಲಿರಲಿಲ್ಲ.