ಸಹಾಯ
೧.
“ಆರಾದ್ಯ ಅವರಿಗೆ ಹುಶಾರಿಲ್ಲವಂತೆ ಸಾರ್”, ವರದಿಗಾರ ದಿವಾಕರನ ದನಿಗೆ ತಲೆಯೆತ್ತಿ ನೋಡಿದೆ, “ಪಂಡಿತ್ ಅರಾಧ್ಯ ರವರೇನ್ರಿ?” ಎಂದೆ
“ಹೌದು ಸಾರ್” ಎಂದ ದಿವಾಕರ.
“ಏನಾಗಿದೆಯಂತ್ರಿ” ಎಂದಿದ್ದಕ್ಕೆ, “ನನಗೆ ಡೀಟೈಲ್ಸ್ ಗೊತ್ತಿಲ್ಲಾಸಾರ್, ಬರೀ ವಿಶಯ ತಿಳಿತು” ಎಂದ ದಿವಾಕರ್.
ಇಡೀ ನಾಡಿನಲ್ಲೇ ಪಂಡಿತ ಅರಾದ್ಯರವರ ಸಂಗೀತ ಕೇಳದವರಿರಲಿಲ್ಲ, ಎಲ್ಲ ಪ್ರತಿಷ್ಟಿತ ಅವಾರ್ಡ್ ಗಳು ಅರಾದ್ಯ ಅವರನ್ನು ಅರಸಿಬಂದಿದ್ದವು. ಆರಾದ್ಯರವರು ನಮ್ಮ ನಾಡಿನ ಸಾಂಸ್ಕೃತಿಕ ಪ್ರತಿನಿಧಿಯಾಗಿದ್ದರು. ನನ್ನ ಅಚ್ಚುಮೆಚ್ಚಿನ ಸಂಗೀತಗಾರನಿಗೆ ಹುಶಾರಿಲ್ಲ ವೆಂದು ತಿಳಿದ ಮೇಲೆ, ನಾನು ಮಾಡುತಿದ್ದ ಕೆಲಸವನ್ನು ಅಲ್ಲೇ ನಿಲ್ಲಿಸಿ, ಸಂಪಾದಕರಿಗೆ ಸುದ್ದಿ ತಿಳಿಸಿ, ಆರಾದ್ಯ ಅವರನ್ನೊಮ್ಮೆ ಮಾತಾಡಿಸಿ ಬರುತ್ತೇನೆ ಎಂದು ಹೇಳಿ, ಬ್ಯಾಗ್ ಹೆಗಲಿಗೇರಿಸಿ, ನನ್ನ ಸ್ಕೂಟರ್ ಹತ್ತಿದೆ. ಆರಾದ್ಯ ಅವರನ್ನು ಅನೇಕ ಬಾರಿ ಭೇಟಿಯಾಗಿದ್ದೆ, ಅವರಿಗೂ ನಾನು ತುಂಬಾ ಪರಿಚಿತನಾಗಿದ್ದೆ. ಸ್ಕೂಟರನ್ನು ನೇರವಾಗಿ ಆರಾಧ್ಯ ಅವರ ಮನೆ ಕಡೆ ತಿರುಗಿಸಿದೆ. ಆವರ ಮನೆ ನಗರದ ಹೊರವಲಯದಲ್ಲಿದ್ದು, ಸೈಟು ದೊಡ್ಡದಾಗಿದ್ದರೂ, ಚಿಕ್ಕದಾಗಿ ಮನೆ ಕಟ್ಟಿಸಿಕೊಂಡಿದ್ದರು.
ಮನೆಯ ಬಾಗಿಲನ್ನು ಮೆಲ್ಲಗೆ ತಟ್ಟಿದೆ, ಸ್ವಲ್ಪ ಸಮಯದ ನಂತರ ಆರಾಧ್ಯ ಅವರ ಹೆಂಡತಿ ವಿಶಾಲಾಕ್ಷಮ್ಮನವರು ಬಾಗಿಲು ತೆರೆದರು, ಮುಖದಲ್ಲಿ ಎಂದಿನಂತಿನ ನಗುವಿರಲಿಲ್ಲ, ಕಣ್ಣನ್ನು ಸಣ್ಣದಾಗಿಸಿ ನೋಡಿ ”ನೀವು ಚಿದಾನಂದ ಅಲ್ಲವೇ” ಎಂದರು, “ಹೌದು, ಆರಾದ್ಯ ಅವರಿಗೆ ಹುಶಾರಿಲ್ಲ ವೆಂದು ತಿಳಿದು ನೋಡಲು ಬಂದೆ” ಎಂದೆ, ಬನ್ನಿ ಒಳಗೆ ಎಂದು ಕರೆದರು, ನಾನು ಒಳಗೆ ಹೋಗಿ, ಚಪ್ಪಲಿಯನ್ನು ಬಿಚ್ಚಿ, ನಿಂತೆ, ಬಾಗಿಲು ಮುಚ್ಚಿದ ವಿಶಾಲಕ್ಷಮ್ಮನವರು, ಅವರು ಹಾಸಿಗೆ ಹಿಡಿದು ಹದಿನೈದು ದಿನವಾಯಿತು, ಆಸ್ಪತ್ರೆಗೆ ಸೇರಿಸಬೇಕು, ಮಂತ್ರಿಗಳಿಗೆ ವಿಶಯ ತಿಳಿಸಿದ್ದರೂ ಯಾರು ಈ ಕಡೆ ತಿರುಗಿ ನೋಡಿಲ್ಲಾ. ಹೀಗೆ ಬನ್ನಿ ಎಂದು ನನ್ನನ್ನು ಆರಾದ್ಯರವರಿದ್ದ ಕೋಣೆಗೆ ಕರೆದೊಯ್ದರು.
ನನ್ನನ್ನು ನೋಡಿ ಕೈಮುಗಿದ ಆರಾದ್ಯರವರು ಮೇಲೆ ಏಳಲು ಪ್ರಯತ್ನಿಸಿದರು, ಏಳಲಾಗಲಿಲ್ಲ, ನಾನೆ ಮುಂದೆ ಹೋಗಿ ಅವರನ್ನು ತಡೆದು, ನೀವು ಮಲಗಿರಿ, ಎಂದು ಅವರ ಹಾಸಿಗೆಯಪಕ್ಕದಲ್ಲಿದ್ದ ಸ್ಟೂಲಿನ ಮೇಲೆ ಕುಳಿತೆ.
ಬಾಡಿದ ದನಿಯಲ್ಲಿ ಆರಾದ್ಯರವರು ಮಾತಾಡಲಾರಂಭಿಸಿದರು, “ನಾಡಿಗಾಗಿ, ಸಂಸ್ಕೃತಿಗಾಗಿ, ನನ್ನ ಜೀವವನ್ನೇ ಸವೆದೆ, ನನಗೆ ಆರೋಗ್ಯವಿಲ್ಲದ ಸಮಯದಲ್ಲಿ ನನ್ನನ್ನು ನೋಡುವವರಾರು ಇಲ್ಲವಾಯಿತು, ಚಿದಾನಂದ ನಿಮ್ಮಿಂದ ಒಂದು ಸಹಾಯವಾಗಬೇಕು, ದಯವಿಟ್ಟು ಸುದ್ದಿ ಸರ್ಕಾರಕ್ಕೆ ತಿಳಿಯುವಂತೆ ಮಾಡಿ, ಸರ್ಕಾರ ನನ್ನ ಆರೋಗ್ಯದ ಬಗ್ಗೆ ಕಾಳಜಿವಹಿಸುವಂತೆ ಮಾಡುವಿರಾ” ಎಂದು ಕೇಳಿಕೊಂಡರು. ನೀವೇನೂ ಯೋಚನೇ ಮಾಡ್ಬೇಡಿ ಸಾರ್, ನಾನದಕ್ಕೆ ವ್ಯವಸ್ಥೆ ಮಾಡ್ತೀನಿ ಎಂದು ಭರವಸೆಯಿತ್ತು. ಅವರಿಂದ ಬೀಳ್ಕೊಟ್ಟು ನೇರ ಆಫೀಸಿಗೆ ಬಂದೆ. ಆರಾಧ್ಯ ಅವರ ಅನಾರೊಗ್ಯದ ಬಗ್ಗೆ ಒಂದು ಲೇಖನ ತಯಾರಿಸಿ ಸಂಪಾದಕರಿಗೆ ತೋರಿಸಿ ಅಚ್ಚಿನಮನೆಗೆ ಕಳುಹಿಸಿದೆ. ಬೆಳಿಗ್ಗೆ ದಿನವಾಣಿಯಲ್ಲಿ ದೊಡ್ಡ ಹೆಡ್ಡಿಂಗ್ನಲ್ಲಿ, “ಆರಾದ್ಯರಿಗೆ ಅನಾರೊಗ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯ” ಪ್ರಕಟವಾಯಿತು.
೨.
ಸುದ್ದಿ ಓದಿದ ಮುಖ್ಯಮಂತ್ರಿ ರಾಮರಾಯರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿ ಸಿದ್ದಪ್ಪನವರನ್ನು ಕರೆಸಿದರು. “ಅಲ್ಲಾರೀ, ಆರಾದ್ಯ ಅವರಿಗೆ ಅನಾರೊಗ್ಯ ಅಂತ ನಾವು ಪೇಪರ್ ಓದಿ ತಿಳ್ಕೋ ಬೇಕೇನ್ರಿ, ನಿಮ್ಮ ಇಲಾಖೆ ಏನ್ಮಾಡ್ತಾಇತ್ರಿ”,
“ಸಾರಿ ಸಾರ್, ನಾನು ಕಳೆದವಾರ ಪ್ರವಾಸಕ್ಕೆ ಹೋಗಿದ್ದರಿಂದ, ಈ ವಿಶಯ ನನ್ನ ಗಮನಕ್ಕೆ ಬಂದಿರಲಿಲ್ಲ ಸಾರ್”.
“ಸರಿ ನಡೀರಿ ಆರಾದ್ಯ ಅವರ ಮನೆಗೆ ಹೋಗೋಣಾ, ಹಾಗೆ, ಪ್ರೆಸ್ ನವರಿಗೂ ಬರೋಕೆ ಹೇಳ್ರಿ” ಎಂದರು ರಾಮರಾಯರು.
ಆರಾಧ್ಯ ಅವರ ಮನೆ ಮುಂದೆ ಮುಖ್ಯಮಂತ್ರಿ ರಾಮರಾಯರು, “ಆರಾದ್ಯ ಅವರ ಅರೋಗ್ಯದ ಹೊಣೆ ನಮ್ಮ ಸರ್ಕಾರದ್ದು, ಅವರ ಆಸ್ಪತ್ರೆಯ ಸಂಪೂರ್ಣ ಖರ್ಚನ್ನು ಸರ್ಕಾರ ಭರಿಸುತ್ತದೆ” ಎಂದು ಹೇಳಿಕೆ ಕೊಟ್ಟರು. ರಾಮರಾಯರೇ ಖುದ್ದು ನಿಂತು, ಆರಾಧ್ಯರನ್ನು ತಕ್ಷಣಾ ಅಸ್ಪತ್ರೆಗೆ ಸೇರಿಸಲು ಏರ್ಪಾಟು ಮಾಡಿದರು.
೩.
ಆಸ್ಪತ್ರೆಯಲ್ಲಿ, ವಿಶಾಲಾಕ್ಷಮ್ಮ ಪತಿಯ ಬಳಿ ಮೂಸಂಬಿಯ ರಸ ಹಿಂಡುತ್ತಾ, ನಾನು ಏಷ್ಟು ಹೇಳಿದರೂ ಇವರು ಕೇಳಲಿಲ್ಲ, ಮನೆ ಮಾರಿಯದರೂ ಸರಿ, ನಿಮ್ಮ ಆರೊಗ್ಯವನ್ನು ಸರಿಪಡಿಸಿಕೊಳ್ಳೊಣ ಎಂದರೆ, ನನಗೇನಾಗಿದೆಯೆ, ಎಲ್ಲಾ ಸರಿಹೋಗುತ್ತೆ ಬಿಡು, ಮನೆ ಮಾರಿದರೆ ಮುಂದೆ ಎಲ್ಲೇ ಬದುಕೋದು, ಅದೂ ಅಲ್ಲದೇ, ನನ್ನಂತಾ ವಿದ್ವಾಂಸರ ಆರೋಗ್ಯದ ಹೊಣೆ ಸರ್ಕಾರದ್ದು, ನೀನೇನು ಯೊಚನೇ ಮಾಡ್ಬೇಡಾ, ಮಂತ್ರಿಗಳ ಸಹಾಯಕನಿಗೆ ವಿಶಯ ತಿಳಿಸಿದ್ದೀನಿ, ಎಂದು ನನ್ನ ಬಾಯಿ ಮುಚ್ಚಿಸಿದರು. ವಾರವಾದರೂ ಯಾರೂ ಈ ಕಡೇ ತಿರುಗಿನೋಡಲೇ ಇಲ್ಲಾ. ಇವರ ಅರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತಾ ಹೋಯಿತು, ಚಿದಾನಂದನಿಂದ ಸಹಾಯದೊರಕದಿದ್ದರೆ ಏನಾಗುತಿತ್ತೋ, ಯಾರೊ ರೂಮಿನೊಳಗೆ ಬಂದಂತಾಗಿ ವಿಶಾಲಾಕ್ಷಮ್ಮನವರ ಯೊಚನೇ ಅಲ್ಲಿಗೇ ನಿಂತಿತು.
ಡಾಕ್ಟರ್ ಮೂರನೇಬಾರಿ, ಆರಾಧ್ಯ ಅವರನ್ನು ಚೆಕ್ ಮಾಡಲು ರೂಮಿನೊಳಗೆ ಬಂದರು, ಆರಾದ್ಯ ಅವರು ಮಲಗಿದ್ದ ರೀತಿ ನೋಡಿ ಗಾಬರಿಯಿಂದ ಅವರನ್ನು ಪರೀಕ್ಷಿಸಿದರು, ಆಷ್ಟರಲ್ಲಾಗಲೇ ಆರಾದ್ಯರವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
೪
ವಿರೋಧ ಪಕ್ಷದ ನಾಯಕ ತಮ್ಮಣ್ಣ ನವರು, ಪ್ರೆಸ್ ಕಾನ್ಫರೆನ್ಸ್ ಕರೆದು, “ಸರ್ಕಾರ ತನ್ನ ಕಾರ್ಯವನ್ನು ನಿರ್ವಹಿಸುವುದರಲ್ಲಿ ಸೋತಿದೆ, ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ಇವತ್ತು ನಾವು ಆರಾದ್ಯರಂತ ಹೆಸರಾಂತ ಸಂಗೀತಗಾರರನ್ನು ಕಳೆದುಕೊಳ್ಳುವಂತಾಗಿದೆ. ಆರಾಧ್ಯರ ಆತ್ಮಕ್ಕೆ ಶಾಂತಿಕೋರುತ್ತಾ, ನಾನು ಇವತ್ತು ಸರ್ಕಾರದ ಕಾರ್ಯವನ್ನು ವಿರೋಧಿಸುತ್ತಾ, ಒಂದು ದಿನದ ಉಪವಾಸವನ್ನು ಕೈಗೊಂಡಿದ್ದೇನೆ”, ಎಂದು ಹೇಳಿಕೆಯಿತ್ತರು.
ರಾಜಕಾರಣದ ಕುಹಕ ಮುಖವನ್ನು ಚೆನ್ನಾಗಿ ತೋರಿಸಿದ್ದೀರಿ.
sunaath
August 30, 2008 at 10:18 am
ಸುನಾಥ ಕಾಕ,
ಪ್ರೋತ್ಸಾಹದ ಮಾತುಗಳಿಗೆ ಧನ್ಯವಾದಗಳು.
-ಬಾಲ
balaglobal
September 1, 2008 at 3:13 am